Wednesday 1 August 2018

ಬದುಕು ಬದಲಾಗಬಹುದು..!



ದುವೆಯ ಇನ್ವಿಟೇಷನ್ ಕೊಡಲೆಂದು ಸ್ಕೂಲ್, ಕಾಲೇಜು ಕ್ಲಾಸ್‍ಮೇಟ್‍ಗಳನ್ನೆಲ್ಲ ಫೇಸ್‍ಬುಕ್, ವಾಟ್ಸ್ಯಾಪ್ ಗ್ರೂಪ್‍ಗಳಲ್ಲಿ ಇರುವ ಸ್ನೇಹಿತರ ಫೋನ್ ನಂಬರ್‍ಗಳನ್ನೆಲ್ಲ ಕಲೆಹಾಕುತ್ತಿದ್ದೆ.. ಆಗ ನೆನಪಾಗಿದ್ದೇ ಆಕೆ.. ಹೌದು ಮುದ್ದು ಮುಖದ, ಉದ್ದ ಜಡೆಯ ಮೂಗುತಿ ಸುಂದರಿಯ ಬಗ್ಗೆ.. ಹೌದು ಬಿಎ ಮಾಡುತ್ತಿದ್ದಾಗ ಒಂದೇ ಡೆಸ್ಕ್‍ನಲ್ಲಿ ಕುಳಿತು ಗೀಚುತ್ತಿದ್ದವರು. ಕಾಲೇಜಿನ ಗಾಸಿಪ್ಪುಗಳ ಕುರಿತು ಮಾತನಾಡುತ್ತಿದ್ದವರು..ಕ್ಲಾಸ್ ನಡೆಯುತ್ತಿರುವಾಗಲೇ ಚೀಟಿಯಲ್ಲಿ ಬರೆದು ಮಾತನಾಡುತ್ತಿದ್ದ ಗೆಳೆತನವದು.... ಅದೊಂದು ದಿನ ಆಕಸ್ಮಿಕವಾಗಿ ಆಗಿದ್ದ ಒಬ್ಬ ಹುಡುಗನ ಭೇಟಿ ಆಕೆಯ ಜೀವನವನ್ನೇ ಬದಲಾಯಿಸಿತ್ತು. ಮನೆಯಲ್ಲೂ ಶಿಸ್ತಿನಿಂದಲೇ ಬೆಳೆದ ಆಕೆಗೆ ಪ್ರೀತಿಯ ಬಂಧನ ಎಲ್ಲ ಕಟ್ಟುನಿಟ್ಟಿನ ಬಂಧನಗಳನ್ನು ಬಿಡಿಸಿತ್ತು..ಮನೆಯ ವಿರೋಧಕ್ಕೂ ತಲೆಬಾಗದೇ ಇಷ್ಟಪಟ್ಟ ಹುಡುಗನೊಂದಿಗೆ ಮದುವೆಯಾಗಿಬಿಟ್ಟಿದ್ದಳು..ಮನೆಯವರಿಂದ ದೂರವಿದ್ದುಬಿಟ್ಟಿದ್ದಳು ಇದಿಷ್ಟೇ ವಿಷಯಗಳು ನನಗೆ ಗೊತ್ತಿದ್ದಿದು.

ಫೇಸ್‍ಬುಕ್‍ನಲ್ಲಿ ತಡಕಾಡುತ್ತಿದ್ದಾಗ ಹೆಸರು ಕಾಣಿಸಿ ತಕ್ಷಣ ಒಂದು ಮೆಸೇಜ್ ಹಾಕಿದೆ ಹಾಗೇ ರಿಪ್ಲೈಗಳು ಮುಂದುವರಿಯಿತು.. ಎಲ್ಲಿದ್ದೀಯಾ ಎಂದು ಕೇಳಿದಾಕ್ಷಣ ಬಂದ ಉತ್ತರ ಬೆಂಗಳೂರು... ಮದುವೆ ಎಂದಾಕ್ಷಣ ಬಂದ ಉತ್ತರ ಡಿವೋರ್ಸ್.. ಆ ಮಾತು ಕೇಳಿ ಅರೆಕ್ಷಣ ದಿಗ್ಭ್ರಮೆಯಾಗಿರುವುದಂತೂ ಸುಳ್ಳಲ್ಲ. . .ಏನಾಗಿತ್ತು ಅಂದಾಗ ಎಲ್ಲಾ ವಿಷಯವನ್ನು ಕಾಲ್ ಮಾಡಿ ವಿವರಿಸಿದ್ದಳು.. ಹೌದು ಅದೊಂದು ಅಪಘಾತ ನನ್ನ ಜೀವನವನ್ನೇ ಬದಲಾಯಿಸಿತ್ತು. ಇಷ್ಟೆಲ್ಲಾ ನಡೆದಿದ್ದು ನನ್ನ ಜೀವನದಲ್ಲೇನಾ ಎನ್ನುವುದನ್ನು ಕಲ್ಪಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ ಅಂದಳು.. ಕಣ್ಣಂಚಿನಲ್ಲಿ ನೀರು ನನಗರಿವಿಲ್ಲದಂತೆಯೇ ನೆಲ ಸೇರಿತ್ತು...
“ಬಸ್ ಹಾಗೂ ಬೈಕ್ ಮಧ್ಯೆ ನಡೆದ ಅಪಘಾತದಲ್ಲಿ ತಲೆಗೆ ಗಂಭೀರ ಏಟಾಗಿ ಬದುಕುಳಿಯುವುದು ಸಂಶಯವೇನೋ ಎಂಬಂತೆ, ದುರಾದೃಷ್ಟವಶಾತ್ ಮತ್ತೆ ಬದುಕಿ ಬಂದಿದ್ದ..’ ದುರಾದೃಷ್ಟವಶಾತ್ ಎನ್ನುವುದೇ ಉಚಿತವೇನೋ..? ಬದುಕು, ಯೋಚನೆಗಳು ಬದಲಾಗಿತ್ತು. ಕೆಲವು ನೆನಪುಗಳೆಲ್ಲ ಸ್ವಲ್ಪ ಕಾಲ ಅವನ ಮನಸ್ಸಿನಿಂದ ಮಾಸಿಹೋಗಿತ್ತು.. ಅಪಘಾತದ ತೀವ್ರತೆಗೆ.. ಆಸ್ಪತ್ರೆಯಿಂದ ಬಂದ ನಂತರದಲ್ಲಿ ಅವನ ಯೋಚನೆಗಳು ಬದಲಾಗಿತ್ತು. ಪ್ರೀತಿ ಅಲ್ಪಸ್ವಲ್ಪವೇ ಕಡಿಮೆಯಾಗಿತ್ತು. ಪ್ರೀತಿಯಿಂದಿದ್ದ ಅನೋನ್ಯ ಸಂಸಾರದಲ್ಲಿ ಸಂಶಯದ ಅಲೆ ಎದ್ದಿತ್ತು. ಒಮ್ಮೊಮ್ಮೆ ಬೆಳಗ್ಗೆ ಪ್ರೀತಿಯಿಂದ ನಡೆದುಕೊಳ್ಳುತ್ತಿದ್ದ ಪ್ರೀತಿಯ ಪತಿಯ, ವರ್ತನೆ ರಾತ್ರಿಯಾದಂತೆ ಬದಲಾಗುತ್ತಿತ್ತು. ರಾತ್ರಿ ಮೂರು ಗಂಟೆಯವರೆಗೂ ನಡೆಯುತ್ತಿದ್ದ ಜಗಳದಲ್ಲಿ ಅತ್ತೆಮಾವ, ನೆರೆಮನೆಯವರು ಮೂಕಪ್ರೇಕ್ಷಕರಾಗುತ್ತಿದ್ದರು.. ನಾನು ಹೊಡೆಸಿಕೊಳ್ಳುತ್ತಿದ್ದೆ..”ನೋವಿನಿಂದ ಕೂಡಿದ ಅವಳ ಮಾತು.. ಎದೆಯನ್ನು ಕರಗಿಸಿತ್ತು.. ಏನೂ ಹೇಳಲಾಗದೇ ಹೂಂಗುಡುತ್ತಿದ್ದೆ..
“ಮೂರು ತಿಂಗಳು ನರಕದಲ್ಲೇ ಕಳೆದಿದ್ದೆ, ಬೆಳಗಿನಿಂದ ರಾತ್ರಿಯವರೆಗೂ ದುಡಿತ, ರಾತ್ರಿ ಮೂರು ಗಂಟೆಯವರೆಗೂ ಹೊಡೆತ.. ಕಣ್ಣೀರಿನಿಂದ ಒದ್ದೆಯಾದ ತಲೆದಿಂಬು ಮಾತ್ರ ನನಗೆ ಸಾಂತ್ವಾನ ನೀಡುತ್ತಿತ್ತು.. ಅತ್ತೆಮಾವನಂತೂ ಮಗನ ಕ್ರೌರ್ಯವನ್ನು ನೋಡಿ ನಿಲ್ಲುತ್ತಿದ್ದರೇ ಹೊರತು ಮಧ್ಯ ಬಂದು ತಡೆಯುತ್ತಿರಲಿಲ್ಲ. ಎರಡು ಬಾರಿ ಆತ್ಮಹತ್ಯೆಗೂ ಪ್ರಯತ್ನಿಸಿದ್ದೆ..ಮತ್ತೆ ಬದುಕಿದ್ದೆ.. ಆದರೂ ನನ್ನ ತವರು ಮನೆಗಂತೂ ಒಂದು ವಿಷಯವನ್ನೂ ಹೇಳದೆ ಮುಚ್ಚಿಟ್ಟಿದೆ. ಕೊನೆಗೂ ಅಣ್ಣನ ಸ್ನೇಹಿತನಿಂದ ಅಣ್ಣನಿಗೆ ವಿಷಯ ತಿಳಿದು ತಂಗಿಯನ್ನು ಉಳಿಸಲೆಂದು ಎಲ್ಲ ಕೋಪವನ್ನು ಬದಿಗೊತ್ತಿ, ಕಾಳಜಿಯಿಂದ ಓಡಿ ಬಂದಿದ್ದ.. ಅದೇ ಮಮಕಾರದಿಂದ ಇವತ್ತು ನಾನು ಬದುಕುಳಿದಿದ್ದೇನೆ. ಬಂದು ನನ್ನ ಕಾಲಮೇಲೆ ನಾನು ನಿಂತು ಬದುಕನ್ನು ಕಟ್ಟಿಕೊಳ್ಳಲು ಹೊರಟಿದ್ದೇನೆ.. ಆ ಕಾಲದಲ್ಲಿ ಒಂದು ರೀತಿಯಲ್ಲಿ ನೋಡುತ್ತಿದ್ದ, ಬಾಯಿಗೊಂದು ಮಾತನಾಡುತ್ತಿದ್ದ ಊರು ಇಂದು ಬೆಂಬಲ ನೀಡುತ್ತಿದೆ. ಅಮ್ಮ, ಅಪ್ಪ, ಅಣ್ಣ, ಅಕ್ಕ ಬೆನ್ನಹಿಂದಿದ್ದಾರೆ.. ಡಿವೋರ್ಸ್‍ಗೆ ಅಪ್ಲೈ ಮಾಡಿದ್ದೇನೆ..ನನ್ನ ಜೀವನವನ್ನು ಹಿಂತಿರುಗಿ ನೋಡಲೂ ಇಷ್ಟವಿಲ್ಲ.. ಯಾರ ಸಹಾಯವಿಲ್ಲದೆಯೂ ನಾನು ಬದುಕಬಲ್ಲೆ, ಪ್ರೀತಿ ನನ್ನ ಜೀವನದಲ್ಲಿ ಆಟವಾಡಿದೆ.,. ಎಚ್ಚೆತ್ತುಕೊಂಡಿದ್ದೇನೆ.. ಮುಂದೆ ನಡೆಯುತ್ತೇನೆ..” ಎನ್ನುವ ಧೃಡ ವಿಶ್ವಾಸ ಅವಳಲ್ಲಿತ್ತು..
ಹೌದು.. ಇಂದು ಕಂಡ ಸಂತೋಷ ನಾಳೆ ನಮ್ಮ ಬದುಕಲ್ಲಿ ಹುಸಿಯಾಗಬಹುದು.. ಖುಷಿಯಾಗಿದ್ದ ಬದುಕಲ್ಲಿ ಸುನಾಮಿಯೇಳಬಹುದು..ಕೆಲವೊಂದು ಆಕಸ್ಮಿಕ ಅಪಘಾತ ಬದುಕನ್ನೇ ಬದಲಾಯಿಸಬಹುದು.. ನಿಮ್ಮ ಆತ್ಮೀಯ ಸಂಬಂಧಗಳನ್ನು ಉಳಿಸುವ ಜವಾಬ್ದಾರಿ ನಿಮ್ಮ ಮೇಲಿದೆ..

No comments:

Post a Comment

ಪಾಸ್‌ವರ್ಡ್‌ ಮರೆತ್ಹೋಗೋ ಗೀಳು...? ಗೋಳೋ..? ಸಮಸ್ಯೆನಾ.. ಗೊತ್ತಿಲ್ಲ..!

    ಕೆ ಲವು ತಿಂಗಳ ಹಿಂದೆ ಫೋನ್‌ ಬಿದ್ದು ಡಿಸ್‌ಪ್ಲೇ ಹೋಗಿ, ಇರೋ ಬರೋ ನಂಬರುಗಳು ಕಳೆದುಕೊಂಡಿದ್ದಾಯ್ತು. ಅದರ ಜೊತೆಗೆ ನೋಟ್‌ನಲ್ಲಿ ಟೈಪಿಸಿಕೊಂಡಿದ್ದ ಇ-ಮೇಲ್, ಫೇಸ್‌ಬ...