ಮಹಾನಗರದ ಟ್ರಾಫಿಕ್ಕು.. ಬಾಯ್ದೆರೆದ ಕೊಳಚೆ ಚರಂಡಿಯ ದುರ್ವಾಸನೆ.. ಕೆಲಸದ ಒತ್ತಡ ಇವೆಲ್ಲವೂ ಸೇರಿ ಒಂದು ರೀತಿಯಲ್ಲಿ ಬೆಂಗಳೂರನ್ನು ಮನಸ್ಸು ದ್ವೇಷಿಸುವಂತೆ ಮಾಡುತ್ತಿದೆ. ಹಾಗಾಗಿಯೇ ಈಗೀಗ ತಾಯ್ನೆಲ ನಮ್ಮ ಕರಾವಳಿಯ ಮಣ್ಣಿನ ಕಂಪು ಮನದ ತುಂಬಾ ಆವರಿಸಿ, ಈಗೀಗ ಕರಾವಳಿಯ ಸೆರಗಿನಲ್ಲಿರುವ ನಮ್ಮೂರು ಅತಿಯಾಗಿ ಕಾಡುತ್ತಿದೆ. ತಿಂಗಳಿಗೊಮ್ಮೆಯಾದರೂ ಊರಿಗೆ ತೆರಳಲು ಮನಸು ಹಾತೊರೆಯುತ್ತದೆ..
ಊರಿಗೆ ಹೋಗುವುದೆಂದರೆ ನನ್ನ ಮೊದಲ ಆಯ್ಕೆ ರೈಲು ಪ್ರಯಾಣ.. ಹೊಗೆಯುಗುಳುವ ಧೂಮಾಸುರ ಬಸ್ಸು, ಎಸಿ ಬಸ್ಸಿನ ವಾಕರಿಕೆ ತರಿಸುವ ಅಸಹನೀಯ ವಾಸನೆಗೆ ಊರಿಗೆ ಕಾಲಿರಿಸುವ ಹೊತ್ತಿಗೆ ಕರಳು ಕಿತ್ತು ಬರುವಂತೆ ಕಕ್ಕಿ, ಊರಿಗೆ ತಲುಪುವಷ್ಟರಲ್ಲಿ ಬಸವಳಿದು ಹೋಗಿರುತ್ತೇನೆ. ಇದೊಂದು ಕಾರಣವಾದರೆ, ಬಲವಾದ ಕಾರಣ ಇನ್ನೊಂದಿದೆ ಅದುವೇ ಪಶ್ಚಿಮದ ಘಟ್ಟದ ಬುಡದಲ್ಲಿ, ಮಡಿಲಲ್ಲಿ ಹಾವಿನಂತೆ ತೆರಳುವ ರೈಲು ಪ್ರಯಾಣ.. ಬೇಕಂತಲೇ ಒಮ್ಮೊಮ್ಮೆ ಆಫೀಸಿಗೆ ಒಂದು ದಿನ ಹೆಚ್ಚು ರಜಾ ಹಾಕಿ ಹಗಲು ಪ್ರಯಾಣದ ಸುಖವನ್ನು ಅನುಭವಿಸುತ್ತೇನೆ. ಪ್ರಕೃತಿಯ ಮಡಿಲಲ್ಲಿ ಮಗುವಾಸೆ ಈ ಹುಚ್ಚು ಮನಸಿಗೆ..
ಮಳೆಗಾಲದ ಆರಂಭದ ಸಮಯದಲ್ಲಿ ನಮ್ಮ ಬಂಟ್ವಾಳದ ರೈಲ್ವೇ ಸ್ಟೇಷನ್ನಿಂದ ಬೆಂಗಳೂರಿಗೆ ಟ್ರೈನ್ನಲ್ಲಿ ಮಧ್ಯಾಹ್ನ ಹೊರಟಿದ್ದೆ.. ಆಗೋಮ್ಮೆ ಈಗೋಮ್ಮೆ ಸುರಿಯುವ ಮಳೆ ಪ್ರಯಾಣಕ್ಕೆ ಸಾಥ್ ಕೊಟ್ಟಿತ್ತು. ಹಸಿರು ಗದ್ದೆ, ಗುಡ್ಡ, ತೋಟ, ಮಳೆ ನೀರು ತುಂಬಿಕೊಂಡು ಹರಿಯುವ ಸಣ್ಣ ಪುಟ್ಟ ತೋಡು, ಹಳ್ಳಗಳನ್ನೆಲ್ಲ ಸುತ್ತು ಹಾಕುತ್ತಾ ಹಳಿಯಲ್ಲಿ ಸಾಗುತ್ತಿದ್ದಂತೆ.. ಅಯ್ಯೋ ಕೆಸುವಿನ ಎಲೆ ಮನೆಯಲ್ಲೇ ಮರೆತುಬಿಟ್ಟಿದ್ದು ನೆನಪಾಗಿ, ರುಚಿಯನ್ನು ಬೇಡುವ ನಾಲಗೆ ಬೇಸರಿಸಿದರೂ, ಆಟಿ ತಿಂಗಳಲ್ಲಿ ಒಮ್ಮೆ ಹೋಗಿ ಪತ್ರೊಡೆ ಮೆದ್ದು ಬರುವುದುಂಟಲ್ಲ..! ಎಂಬ ಯೋಚನೆ ಬಂದು ಸುಮ್ಮನಾದೆ..
ಸುಬ್ರಹ್ಮಣ್ಯ ತಲುಪುವರೆಗೂ ಖಾಲಿ ಇದ್ದ ಟ್ರೈನ್ನ ಬೋಗಿಗಳೆಲ್ಲ, ಸುಬ್ರಹ್ಮಣ್ಯ ದಾಟುವುದರೊಳಗೆ ತುಂಬಿಬಿಟ್ಟಿತ್ತು.. ಮುಡಿಕೊಟ್ಟ ಭಕ್ತಾದಿಗಳ ಜೊತೆಗೆ ಸುಬ್ರಹ್ಮಣ್ಯ ಸ್ವಾಮಿಯ ಗಂಧಪ್ರಸಾದದ ಪರಿಮಳ ಮೆಲುವಾಗಿ ಮೂಗನ್ನು ಸೋಕಿತ್ತು. ಸುಬ್ರಹ್ಮಣ್ಯ ದಾಟಿದ ತಕ್ಷಣವೇ ಎಲ್ಲರೂ ಬೋಗಿಯ ಬಾಗಿಲಲ್ಲಿ ಜಾಗ ಹುಡುಕಲು ಶುರು ಮಾಡುತ್ತಾರೆ...ಯಾಕೆ ಅಂತಿಯಾ ಹಸಿರು ಪ್ರಕೃತಿಯನ್ನು ಸವಿಯಲು..ಹೌದು ಪಶ್ಚಿಮ ಘಟ್ಟದ ಪ್ರಕೃತಿ ದೃಶ್ಯ ವೈಭವವನ್ನು ಕಣ್ತುಂಬಿಕೊಳ್ಳಲು ಸಿಗುವುದೊಂದೆ ಅವಕಾಶ.. ನನ್ನ ಪುಣ್ಯಕ್ಕೆ ಎಡಭಾಗದಲ್ಲೇ ಕಿಟಕಿಯ ಪಕ್ಕದ ಸೀಟು ನನ್ನದಾಗಿತ್ತು.. ರೈಲು ಪಶ್ಚಿಮ ಘಟ್ಟದ ಮಡಿಲೊಳಗೆ ಪ್ರವೇಶಿಸಿತ್ತು..
ನೀರವ ಕಾಡಿನೊಳಗೆ ಕಪ್ಪೆಯ ವಟರ್ ವಟರ್ ಸದ್ದು.. ಜೀ..ಎನ್ನುವ ಜೀರುಂಡೆಯ ಝೇಂಕಾರ.. ಕಿವಿಗೆ ಮಾತ್ರ ಕೇಳಿಸುತ್ತಿತ್ತು..
ಬೆಟ್ಟದ ಮೇಲಿಂದ ಇಳಿಯುವ ಸಣ್ಣ ಸಣ್ಣ ಜಲಪಾತದ ನೀರು ಬಲಭಾಗದ ಬಾಗಿಲಲ್ಲಿ ಕುಳಿತವರ ಕಾಲು ಒದ್ದೆ ಮಾಡುತ್ತಿತ್ತು.. ಹಸಿರನ್ನು ಕಣ್ತುಂಬಿಕೊಳ್ಳುತ್ತಾ ಹಸಿರ ಧಾನ್ಯದಲ್ಲಿ ತೊಡಗಿದ್ದರೆ, ಗಬಕ್ಕನೆ ಎದುರಾಗುವ ಸುರಂಗ ಮಾರ್ಗದ ಕತ್ತಲು, ಪ್ರಯಾಣಿಕರ ಖುಷಿಯ ಕಿರುಚಾಟ ಕೇಳಿ ಹಸಿರ ಧ್ಯಾನದಿಂದ ಬಂದು ಒಂದು ನಗುವ ನಕ್ಕು ಸುಮ್ಮನಾದೆ.. ಮತ್ತೆ ಹಸಿರು ಮತ್ತು ನನ್ನ ನಡುವೆ ಮಾತುಕತೆ ಶುರು..ಮಧ್ಯ ಮಧ್ಯ ಎದುರಾಗುವ ಸುರಂಗಮಾರ್ಗದ ಕತ್ತಲೆಗೆ ಯೋಚನೆಗೆ ಬ್ರೇಕ್ ಹಾಕುತ್ತಿತ್ತು..
ಹಸಿರ ಚಾದರದ ಮೇಲೆ ನಿಂತ ಮಳೆಹನಿ..ಮರಗಿಡಗಳ ಸವರಿಕೊಂಡು ಸಾಗುವ ಮಂಜು.. ಅಲ್ಲೆಲ್ಲೋ ಬೆಟ್ಟದ ಮೇಲೇರಿ ಕುಳಿತ ಮಳೆ ಮೋಡ, ಬೆಟ್ಟದ ಮೇಲಿಂದ ಇಳಿವ ಬಿಳಿನೊರೆಯ ಜಲಪಾತಗಳು ಕಣ್ಣಿಗೆ ಹಬ್ಬವನ್ನುಂಟು ಮಾಡುತ್ತಿತ್ತು. ತೆರೆದ ಕಿಟಕಿಯಿಂದ ಆಗಾಗ ಪಟಪಟನೆ ಬೀಳುವ ಮಳೆಹನಿಗಳು ಚಳಿಯನ್ನುಂಟು ಮಾಡುತ್ತಿತ್ತು.
ಇನ್ನೊಂದು ಕುತೂಹಲವಾಗಿ ದೃಷ್ಟಿಹಾಯಿಸುತ್ತಿದ್ದುದು ಕಾಡುಪ್ರಾಣಿಗಳೆಡೆಗೆ...ಒಂದಾದರೂ ಕಾಡು ಪ್ರಾಣಿಗಳು ಗೋಚರಿಸಬಹುದೇನೋ ಎಂದು ಆಸೆಯಿಂದ ಎದುರುನೋಡುತ್ತಿದೆ. ಕಣ್ಣಿಗೆ ಕಾಣಿಸುತ್ತಿದ್ದುದು.. ರೈಲ್ವೇ ಟ್ರ್ಯಾಕ್ಗಳ ಕೆಲಸ ಮಾಡುತ್ತಿದ್ದ ಮಾನವರು ಮಾತ್ರ. ನನ್ನ ಆಸೆಗೋ ಏನೋ ಪಶ್ಚಿಮ ಘಟ್ಟದ ಅಂಚಿನ ಸಕಲೇಶಪುರದವೆರೆಗೆ ಬಂದಾಗ ಹಲಸಿನ ಮರದಲ್ಲೊಂದು, ಯಾವುದೇ ಪರಿವೆಯಿಲ್ಲದೆ, ಕೋತಿಯೊಂದು ಹಲಸಿನ ಹಣ್ಣು ತಿನ್ನುತ್ತಿತ್ತು.. ಅಬ್ಬಾ.. ಕಡೆಗಾದರೂ ಒಂದು ಪ್ರಾಣಿಯನ್ನು ನೋಡಿದೆನಲ್ಲಾ ಎಂದು..
ಸಾವಿರಾರು ಅಪರಿಚಿತ ಮರಗಳ ನಡುವೆ ಪರಿಚಿತ ಹಲಸು, ತೇಗ, ಉಪ್ಪಳಿಗೆ, ಹೊಂಗೆ, ಇನ್ನಿತರ ಮರಗಳನ್ನು ನೋಡಿ, ಬಹುಕಾಲದ ಪರಿಚಯಸ್ಥರನ್ನು ನೋಡಿದಂತೆ ಖುಷಿಪಟ್ಟಿದ್ದೆ.. ಹೌದು ಅಜ್ಜಿಮನೆಯ ಹಳ್ಳಿಯ ವಾತಾವರಣದಲ್ಲಿ ಬೆಳೆದ ನನಗೆ ಈ ಮರಗಳೆಲ್ಲವುಗಳ ಹೆಸರು ಅಜ್ಜಿ, ಮಾವ ಹೇಳಿಕೊಟ್ಟಿದ್ದರು.. ಹೌದು ಕಾಡು, ಬೆಟ್ಟ, ತೋಟ, ಗದ್ದೆಯ ಅಂಗಳದಲ್ಲಿ ಬೆಳೆದವರಿಗೆ ಸಿಟಿ ಲೈಫ್ಗೆ ಅಡ್ಜಸ್ಟ್ ಆಗಿ ಲೈಫ್ ನಡೆಸೋದು ಸ್ವಲ್ಪ ಕಷ್ಟಾನೇ ಬಿಡಿ.. ನನ್ನ ಪ್ರಯಾಣದ ಸ್ಟೋರಿ ಹೇಳೋಕೆ ಹೋಗಿ ಎಲ್ಲೆಲ್ಲಿಗೂ ಹೋಗ್ತಾ ಇದ್ದೀನಿ.. ಅಂತೂ ಇಂತೂ ಸಕಲೇಶಪುರ ತಲುಪುವಷ್ಟರಲ್ಲಿ ಪಶ್ಚಿಮ ಘಟ್ಟದ ಪ್ರಕೃತಿ ಸೌಂದರ್ಯವನ್ನು ಅರ್ಧಮರ್ಧ ಸವಿದಂತೆ ಆಗಿತ್ತು.. ಯಾಕಂದ್ರೆ.. ಬರೀ ಕಿಟಕಿಯಿಂದ ಮಾತ್ರ ಹೊರಗಿಣುಕಬೇಕಿತ್ತು.. ಕೆಳಗಿಳಿಯುವ ಅವಕಾಶವೇ ಸಿಕ್ಕಿರಲಿಲ್ಲ.. ಜೀವನದಲ್ಲಿ ಒಮ್ಮೆಯಾದರೂ ಸಕಲೇಶಪುರದಿಂದ ಸುಬ್ರಹ್ಮಣ್ಯದವರೆಗೂ ರೈಲ್ವೇ ಟ್ರ್ಯಾಕ್ನಲ್ಲಿ ನಡೆಯಬೇಕೆನ್ನುವ ಕನಸನ್ನು ಹುಟ್ಟುಹಾಕಿದ್ದೇ ಈ ರೈಲು ಪ್ರಯಾಣ.. ಎಷ್ಟೋ ಜನ ಸುಬ್ರಹ್ಮಣ್ಯಕ್ಕೆ ಬರುವ ಭಕ್ತರು ಪ್ರಕೃತಿ ಸೌಂದರ್ಯವನ್ನು ನೋಡಲೆಂದೆ ಹಗಲು ರೈಲಿನಲ್ಲಿ ಬರುತ್ತಾರೆ.
ವಿಷಾದವೆಂದರೆ: ರಾಜಕಾರಣಿಗಳು ಹಣ ತಿನ್ನಲೆಂದು ಮಾಡಿರುವ ‘ಎತ್ತಿನ ಹೊಳೆ ಯೋಜನೆ’ಗೆ ಸಿಲುಕಿ, ಕೆಡವಲ್ಪಟ್ಟ ಕಾಡುಗಳು, ಕೊರೆಸಿದ ಗುಡ್ಡಗಳು, ಭೀಮಗಾತ್ರದ ಪೈಪುಗಳು, ಹಸಿರ ಗದ್ದೆ, ತೋಟವನ್ನು ಕೆಡವಿ ಹಾಕಿದ ಪೈಪುಗಳನ್ನು ನೋಡಿ ಹೊಟ್ಟೆ ಚುರುಕ್ಕೆಂದಿತ್ತು.. ಯಾರು ತಡೆಯಬಲ್ಲವರೋ.. ಈ ಮೂರ್ಖ ರಾಜಕಾರಣಿಗಳನ್ನು...?