Thursday 26 July 2018

ಬಂಟ್ವಾಳ ಟು ಬೆಂಗಳೂರು..


ಹಾನಗರದ ಟ್ರಾಫಿಕ್ಕು.. ಬಾಯ್ದೆರೆದ ಕೊಳಚೆ ಚರಂಡಿಯ ದುರ್ವಾಸನೆ.. ಕೆಲಸದ ಒತ್ತಡ ಇವೆಲ್ಲವೂ ಸೇರಿ ಒಂದು ರೀತಿಯಲ್ಲಿ ಬೆಂಗಳೂರನ್ನು ಮನಸ್ಸು ದ್ವೇಷಿಸುವಂತೆ ಮಾಡುತ್ತಿದೆ. ಹಾಗಾಗಿಯೇ ಈಗೀಗ ತಾಯ್ನೆಲ ನಮ್ಮ ಕರಾವಳಿಯ ಮಣ್ಣಿನ ಕಂಪು ಮನದ ತುಂಬಾ ಆವರಿಸಿ, ಈಗೀಗ ಕರಾವಳಿಯ ಸೆರಗಿನಲ್ಲಿರುವ ನಮ್ಮೂರು ಅತಿಯಾಗಿ ಕಾಡುತ್ತಿದೆ. ತಿಂಗಳಿಗೊಮ್ಮೆಯಾದರೂ ಊರಿಗೆ ತೆರಳಲು ಮನಸು ಹಾತೊರೆಯುತ್ತದೆ..
ಊರಿಗೆ ಹೋಗುವುದೆಂದರೆ ನನ್ನ ಮೊದಲ ಆಯ್ಕೆ ರೈಲು ಪ್ರಯಾಣ.. ಹೊಗೆಯುಗುಳುವ ಧೂಮಾಸುರ ಬಸ್ಸು, ಎಸಿ ಬಸ್ಸಿನ ವಾಕರಿಕೆ ತರಿಸುವ ಅಸಹನೀಯ ವಾಸನೆಗೆ ಊರಿಗೆ ಕಾಲಿರಿಸುವ ಹೊತ್ತಿಗೆ ಕರಳು ಕಿತ್ತು ಬರುವಂತೆ ಕಕ್ಕಿ, ಊರಿಗೆ ತಲುಪುವಷ್ಟರಲ್ಲಿ ಬಸವಳಿದು ಹೋಗಿರುತ್ತೇನೆ. ಇದೊಂದು ಕಾರಣವಾದರೆ, ಬಲವಾದ ಕಾರಣ ಇನ್ನೊಂದಿದೆ ಅದುವೇ ಪಶ್ಚಿಮದ ಘಟ್ಟದ ಬುಡದಲ್ಲಿ, ಮಡಿಲಲ್ಲಿ ಹಾವಿನಂತೆ ತೆರಳುವ ರೈಲು ಪ್ರಯಾಣ.. ಬೇಕಂತಲೇ ಒಮ್ಮೊಮ್ಮೆ ಆಫೀಸಿಗೆ ಒಂದು ದಿನ ಹೆಚ್ಚು ರಜಾ ಹಾಕಿ ಹಗಲು ಪ್ರಯಾಣದ ಸುಖವನ್ನು ಅನುಭವಿಸುತ್ತೇನೆ. ಪ್ರಕೃತಿಯ ಮಡಿಲಲ್ಲಿ ಮಗುವಾಸೆ ಈ ಹುಚ್ಚು ಮನಸಿಗೆ..

ಮಳೆಗಾಲದ ಆರಂಭದ ಸಮಯದಲ್ಲಿ ನಮ್ಮ ಬಂಟ್ವಾಳದ ರೈಲ್ವೇ ಸ್ಟೇಷನ್‍ನಿಂದ ಬೆಂಗಳೂರಿಗೆ ಟ್ರೈನ್‍ನಲ್ಲಿ ಮಧ್ಯಾಹ್ನ ಹೊರಟಿದ್ದೆ.. ಆಗೋಮ್ಮೆ ಈಗೋಮ್ಮೆ ಸುರಿಯುವ ಮಳೆ ಪ್ರಯಾಣಕ್ಕೆ ಸಾಥ್ ಕೊಟ್ಟಿತ್ತು. ಹಸಿರು ಗದ್ದೆ, ಗುಡ್ಡ, ತೋಟ, ಮಳೆ ನೀರು ತುಂಬಿಕೊಂಡು ಹರಿಯುವ ಸಣ್ಣ ಪುಟ್ಟ ತೋಡು, ಹಳ್ಳಗಳನ್ನೆಲ್ಲ ಸುತ್ತು ಹಾಕುತ್ತಾ ಹಳಿಯಲ್ಲಿ ಸಾಗುತ್ತಿದ್ದಂತೆ.. ಅಯ್ಯೋ ಕೆಸುವಿನ ಎಲೆ ಮನೆಯಲ್ಲೇ ಮರೆತುಬಿಟ್ಟಿದ್ದು ನೆನಪಾಗಿ, ರುಚಿಯನ್ನು ಬೇಡುವ ನಾಲಗೆ ಬೇಸರಿಸಿದರೂ, ಆಟಿ ತಿಂಗಳಲ್ಲಿ ಒಮ್ಮೆ ಹೋಗಿ ಪತ್ರೊಡೆ ಮೆದ್ದು ಬರುವುದುಂಟಲ್ಲ..! ಎಂಬ ಯೋಚನೆ ಬಂದು ಸುಮ್ಮನಾದೆ..
ಸುಬ್ರಹ್ಮಣ್ಯ ತಲುಪುವರೆಗೂ ಖಾಲಿ ಇದ್ದ ಟ್ರೈನ್‍ನ ಬೋಗಿಗಳೆಲ್ಲ, ಸುಬ್ರಹ್ಮಣ್ಯ ದಾಟುವುದರೊಳಗೆ ತುಂಬಿಬಿಟ್ಟಿತ್ತು.. ಮುಡಿಕೊಟ್ಟ ಭಕ್ತಾದಿಗಳ ಜೊತೆಗೆ ಸುಬ್ರಹ್ಮಣ್ಯ ಸ್ವಾಮಿಯ ಗಂಧಪ್ರಸಾದದ ಪರಿಮಳ ಮೆಲುವಾಗಿ ಮೂಗನ್ನು ಸೋಕಿತ್ತು. ಸುಬ್ರಹ್ಮಣ್ಯ ದಾಟಿದ ತಕ್ಷಣವೇ ಎಲ್ಲರೂ ಬೋಗಿಯ ಬಾಗಿಲಲ್ಲಿ ಜಾಗ ಹುಡುಕಲು ಶುರು ಮಾಡುತ್ತಾರೆ...ಯಾಕೆ ಅಂತಿಯಾ ಹಸಿರು ಪ್ರಕೃತಿಯನ್ನು ಸವಿಯಲು..ಹೌದು ಪಶ್ಚಿಮ ಘಟ್ಟದ ಪ್ರಕೃತಿ ದೃಶ್ಯ ವೈಭವವನ್ನು ಕಣ್ತುಂಬಿಕೊಳ್ಳಲು ಸಿಗುವುದೊಂದೆ ಅವಕಾಶ.. ನನ್ನ ಪುಣ್ಯಕ್ಕೆ ಎಡಭಾಗದಲ್ಲೇ ಕಿಟಕಿಯ ಪಕ್ಕದ ಸೀಟು ನನ್ನದಾಗಿತ್ತು.. ರೈಲು ಪಶ್ಚಿಮ ಘಟ್ಟದ ಮಡಿಲೊಳಗೆ ಪ್ರವೇಶಿಸಿತ್ತು..
ನೀರವ ಕಾಡಿನೊಳಗೆ ಕಪ್ಪೆಯ ವಟರ್ ವಟರ್ ಸದ್ದು.. ಜೀ..ಎನ್ನುವ ಜೀರುಂಡೆಯ ಝೇಂಕಾರ.. ಕಿವಿಗೆ ಮಾತ್ರ ಕೇಳಿಸುತ್ತಿತ್ತು..
ಬೆಟ್ಟದ ಮೇಲಿಂದ ಇಳಿಯುವ ಸಣ್ಣ ಸಣ್ಣ ಜಲಪಾತದ ನೀರು ಬಲಭಾಗದ ಬಾಗಿಲಲ್ಲಿ ಕುಳಿತವರ ಕಾಲು ಒದ್ದೆ ಮಾಡುತ್ತಿತ್ತು.. ಹಸಿರನ್ನು ಕಣ್ತುಂಬಿಕೊಳ್ಳುತ್ತಾ ಹಸಿರ ಧಾನ್ಯದಲ್ಲಿ ತೊಡಗಿದ್ದರೆ, ಗಬಕ್ಕನೆ ಎದುರಾಗುವ ಸುರಂಗ ಮಾರ್ಗದ ಕತ್ತಲು, ಪ್ರಯಾಣಿಕರ ಖುಷಿಯ ಕಿರುಚಾಟ ಕೇಳಿ ಹಸಿರ ಧ್ಯಾನದಿಂದ ಬಂದು ಒಂದು ನಗುವ ನಕ್ಕು ಸುಮ್ಮನಾದೆ.. ಮತ್ತೆ ಹಸಿರು ಮತ್ತು ನನ್ನ ನಡುವೆ ಮಾತುಕತೆ ಶುರು..ಮಧ್ಯ ಮಧ್ಯ ಎದುರಾಗುವ ಸುರಂಗಮಾರ್ಗದ ಕತ್ತಲೆಗೆ ಯೋಚನೆಗೆ ಬ್ರೇಕ್ ಹಾಕುತ್ತಿತ್ತು..
ಹಸಿರ ಚಾದರದ ಮೇಲೆ ನಿಂತ ಮಳೆಹನಿ..ಮರಗಿಡಗಳ ಸವರಿಕೊಂಡು ಸಾಗುವ ಮಂಜು.. ಅಲ್ಲೆಲ್ಲೋ ಬೆಟ್ಟದ ಮೇಲೇರಿ ಕುಳಿತ ಮಳೆ ಮೋಡ, ಬೆಟ್ಟದ ಮೇಲಿಂದ ಇಳಿವ ಬಿಳಿನೊರೆಯ ಜಲಪಾತಗಳು ಕಣ್ಣಿಗೆ ಹಬ್ಬವನ್ನುಂಟು ಮಾಡುತ್ತಿತ್ತು. ತೆರೆದ ಕಿಟಕಿಯಿಂದ ಆಗಾಗ ಪಟಪಟನೆ ಬೀಳುವ ಮಳೆಹನಿಗಳು ಚಳಿಯನ್ನುಂಟು ಮಾಡುತ್ತಿತ್ತು.

ಇನ್ನೊಂದು ಕುತೂಹಲವಾಗಿ ದೃಷ್ಟಿಹಾಯಿಸುತ್ತಿದ್ದುದು ಕಾಡುಪ್ರಾಣಿಗಳೆಡೆಗೆ...ಒಂದಾದರೂ ಕಾಡು ಪ್ರಾಣಿಗಳು ಗೋಚರಿಸಬಹುದೇನೋ ಎಂದು ಆಸೆಯಿಂದ ಎದುರುನೋಡುತ್ತಿದೆ. ಕಣ್ಣಿಗೆ ಕಾಣಿಸುತ್ತಿದ್ದುದು.. ರೈಲ್ವೇ ಟ್ರ್ಯಾಕ್‍ಗಳ ಕೆಲಸ ಮಾಡುತ್ತಿದ್ದ ಮಾನವರು ಮಾತ್ರ. ನನ್ನ ಆಸೆಗೋ ಏನೋ ಪಶ್ಚಿಮ ಘಟ್ಟದ ಅಂಚಿನ ಸಕಲೇಶಪುರದವೆರೆಗೆ ಬಂದಾಗ ಹಲಸಿನ ಮರದಲ್ಲೊಂದು, ಯಾವುದೇ ಪರಿವೆಯಿಲ್ಲದೆ, ಕೋತಿಯೊಂದು ಹಲಸಿನ ಹಣ್ಣು ತಿನ್ನುತ್ತಿತ್ತು.. ಅಬ್ಬಾ.. ಕಡೆಗಾದರೂ ಒಂದು ಪ್ರಾಣಿಯನ್ನು ನೋಡಿದೆನಲ್ಲಾ ಎಂದು..

ಸಾವಿರಾರು ಅಪರಿಚಿತ ಮರಗಳ ನಡುವೆ ಪರಿಚಿತ ಹಲಸು, ತೇಗ, ಉಪ್ಪಳಿಗೆ, ಹೊಂಗೆ, ಇನ್ನಿತರ ಮರಗಳನ್ನು ನೋಡಿ, ಬಹುಕಾಲದ ಪರಿಚಯಸ್ಥರನ್ನು ನೋಡಿದಂತೆ ಖುಷಿಪಟ್ಟಿದ್ದೆ.. ಹೌದು ಅಜ್ಜಿಮನೆಯ ಹಳ್ಳಿಯ ವಾತಾವರಣದಲ್ಲಿ ಬೆಳೆದ ನನಗೆ ಈ ಮರಗಳೆಲ್ಲವುಗಳ ಹೆಸರು ಅಜ್ಜಿ, ಮಾವ ಹೇಳಿಕೊಟ್ಟಿದ್ದರು.. ಹೌದು ಕಾಡು, ಬೆಟ್ಟ, ತೋಟ, ಗದ್ದೆಯ ಅಂಗಳದಲ್ಲಿ ಬೆಳೆದವರಿಗೆ ಸಿಟಿ ಲೈಫ್‍ಗೆ ಅಡ್ಜಸ್ಟ್ ಆಗಿ ಲೈಫ್ ನಡೆಸೋದು ಸ್ವಲ್ಪ ಕಷ್ಟಾನೇ ಬಿಡಿ.. ನನ್ನ ಪ್ರಯಾಣದ ಸ್ಟೋರಿ ಹೇಳೋಕೆ ಹೋಗಿ ಎಲ್ಲೆಲ್ಲಿಗೂ ಹೋಗ್ತಾ ಇದ್ದೀನಿ.. ಅಂತೂ ಇಂತೂ ಸಕಲೇಶಪುರ ತಲುಪುವಷ್ಟರಲ್ಲಿ ಪಶ್ಚಿಮ ಘಟ್ಟದ ಪ್ರಕೃತಿ ಸೌಂದರ್ಯವನ್ನು ಅರ್ಧಮರ್ಧ ಸವಿದಂತೆ ಆಗಿತ್ತು.. ಯಾಕಂದ್ರೆ.. ಬರೀ ಕಿಟಕಿಯಿಂದ ಮಾತ್ರ ಹೊರಗಿಣುಕಬೇಕಿತ್ತು.. ಕೆಳಗಿಳಿಯುವ ಅವಕಾಶವೇ ಸಿಕ್ಕಿರಲಿಲ್ಲ.. ಜೀವನದಲ್ಲಿ ಒಮ್ಮೆಯಾದರೂ ಸಕಲೇಶಪುರದಿಂದ ಸುಬ್ರಹ್ಮಣ್ಯದವರೆಗೂ ರೈಲ್ವೇ ಟ್ರ್ಯಾಕ್‍ನಲ್ಲಿ ನಡೆಯಬೇಕೆನ್ನುವ ಕನಸನ್ನು ಹುಟ್ಟುಹಾಕಿದ್ದೇ ಈ ರೈಲು ಪ್ರಯಾಣ.. ಎಷ್ಟೋ ಜನ ಸುಬ್ರಹ್ಮಣ್ಯಕ್ಕೆ ಬರುವ ಭಕ್ತರು ಪ್ರಕೃತಿ ಸೌಂದರ್ಯವನ್ನು ನೋಡಲೆಂದೆ ಹಗಲು ರೈಲಿನಲ್ಲಿ ಬರುತ್ತಾರೆ. 
ವಿಷಾದವೆಂದರೆ: ರಾಜಕಾರಣಿಗಳು ಹಣ ತಿನ್ನಲೆಂದು ಮಾಡಿರುವ ‘ಎತ್ತಿನ ಹೊಳೆ ಯೋಜನೆ’ಗೆ ಸಿಲುಕಿ, ಕೆಡವಲ್ಪಟ್ಟ ಕಾಡುಗಳು, ಕೊರೆಸಿದ ಗುಡ್ಡಗಳು, ಭೀಮಗಾತ್ರದ ಪೈಪುಗಳು, ಹಸಿರ ಗದ್ದೆ, ತೋಟವನ್ನು ಕೆಡವಿ ಹಾಕಿದ ಪೈಪುಗಳನ್ನು ನೋಡಿ ಹೊಟ್ಟೆ ಚುರುಕ್ಕೆಂದಿತ್ತು.. ಯಾರು ತಡೆಯಬಲ್ಲವರೋ.. ಈ ಮೂರ್ಖ ರಾಜಕಾರಣಿಗಳನ್ನು...?

Friday 13 July 2018

ಮತ್ತೆ ಬರೆಯಬೇಕು..



ಪಿಯುಸಿ ಮುಗಿಸಿ, ಪತ್ರಿಕೋದ್ಯಮ ವಿಷಯವನ್ನು ಅವಚಿಕೊಂಡು ಪದವಿಯ ಮೆಟ್ಟಿಲು ಹತ್ತಿ, ಅದೇ ಪತ್ರಿಕೋದ್ಯಮವನ್ನು ಬಗಲಿಗೇರಿಸಿಕೊಂಡು ಸ್ನಾತಕೋತ್ತರ ಮೆಟ್ಟಿಲು ಹತ್ತಿದ್ದೆ. ಕನಸುಗಣ್ಣಿಗೆ ಕಾಣಿಸುತ್ತಿದ್ದುದು ಬರಿಯ ಬರವಣಿಗೆ.., ಬರೆಯಬೇಕೆನ್ನುವ ಹುಮ್ಮಸ್ಸಿನಲ್ಲಿ ಬರೆದ ಲೇಖನಗಳು, ಹನಿಯಾಗಿ ಸೇರುತ್ತಿದ್ದ ಹನಿಗವನಗಳು.. ಹೀಗೆ ಬರೆದೂ ಬರೆದೂ ಬರಹಗಾರ್ತಿಯಾಗಬೇಕೆನ್ನುವ ಬೆಟ್ಟದಷ್ಟು ಕನಸುಗಳನ್ನು ಹೊತ್ತು ಉದ್ಯೋಗಕ್ಕೆ ಕಾಲಿಟ್ಟಿದ್ದೆ ಮಾಧ್ಯಮ ಕ್ಷೇತ್ರಕ್ಕೆ..
ಮೊದಲಿಗೆ ಕ್ರೀಡಾ ಮಾಸಪತ್ರಿಕೆಯಲ್ಲಿ ಬರೆಯಲು ಆರಂಭಿಸಿದ್ದು, ನಂತರದಲ್ಲಿ ಕನ್ನಡದ ಪ್ರಮುಖ ಪತ್ರಿಕೆಯಲ್ಲಿ ಕಲಿಕಾ ಪತ್ರಕರ್ತೆಯಾಗಿ, ಬರವಣಿಗೆಯನ್ನು ಸಾಕಷ್ಟು ತಿದ್ದಿಕೊಂಡು, ನನಗೇ ಅಚ್ಚರಿಯಾಗುವಂತೆ ಬರೆಯಲಾರಂಭಿಸಿದ್ದೆ..ಆಕಸ್ಮಿಕವಾಗಿ ಪತ್ರಿಕೋದ್ಯಮ ಉಪನ್ಯಾಸಕಿಯಾದರೂ, ಬರವಣಿಗೆಗೆ ಸಮಯ ಸಾಲದೇ ಒಳಗೊಳಗೇ ಕೊರಗುತ್ತಿದ್ದೆ. ಮತ್ತೆ ಬರೆಯುವ ಕನಸು ಹೊತ್ತು ಕರಾವಳಿಯ ತೀರದಿಂದ ಮಹಾನಗರ ಬೆಂಗಳೂರಿಗೆ ಆಗಮಿಸಿದ್ದೆ.. ಮತ್ತೆ ಕೆಲಸದ ಹುಡುಕಾಟ.. ಸಿಕ್ಕಿದ್ದು ಒಂದು ವಾಹಿನಿಯಲ್ಲಿ.. ಆಸಕ್ತಿ ಇದ್ದಿದ್ದು ಬರವಣಿಗೆಯಲ್ಲಿ..!
ಒಂದು ವರ್ಷ..ಕಳೆದಿದೆ.. ಹೌದು ಒಂದು ವರ್ಷದಲ್ಲಿ ಮನಸ್ಸಿಗೆ ಇಷ್ಟವಾಗುವಂತೆ, ಸಮಾಧಾನವಾಗುವಂತೆ ಬರೆದಿದ್ದು ಒಂದು ಬರವಣಿಗೆಯೂ ಕಾಣುತ್ತಿಲ್ಲ.. ಮೂಲೆಗುಂಪಾಗಿದೆ ಯೋಚನೆಗಳು..ಪದಗಳು.. ನೋಯುತ್ತಿದೆ ಮನಸು...
ಒಮ್ಮೊಮ್ಮೆ ಅಳುತ್ತವೆ ನನ್ನೊಳಗೆ ಬಂಧಿಯಾಗಿರುವ ಪದಗಳು, ಹೊರಬರಲಾಗದೆ.. ಬರೆಯಬೇಕೆನಿಸುತ್ತಿದೆ.. ಬಾಲ್ಯದ ದಿನಗಳ ಬಗ್ಗೆ.. ಮರದ ಸೇತುವೆಯಿಂದ ಹಲಸಿನಹಣ್ಣು ಎತ್ತಿ ಹಾಕಿ ಹಲಸಿನ ಹಣ್ಣು ಸವಿದಿದ್ದು,  ಸೀತಾಫಲದ ಮರದಿಂದ ಬಿದ್ದು ಕಾಲಿನ ಮಾಂಸ ಕಿತ್ತು ಬಂದಿದ್ದು.. ಅಮ್ಮ ಕೋಲು ಹಿಡಿದು ಅಟ್ಟಾಡಿಸಿಕೊಂಡು ಬಂದ ಕಥೆ, ಮೊದಲ ಬಾರಿ ಕುತೂಹಲದಿಂದ ನೋಡಿದ ಕುರ್ಚಿಯ ಮೇಲೆ ಕೂರಿಸಿದ ಯಾರದೋ ಶವ.. ಹೊಸ ವರ್ಷದ ಆರಂಭಕ್ಕೆ ಹಿಂದಿನ ದಿನ ನಮ್ಮೂರ ಬಾರ್ ಮುಂದೆ ಕೂರಿಸಿದ ತಾತನ ಗೊಂಬೆಯ ಕೈಯ ಸ್ಪರ್ಶ.. ಬಾಲ್ಯದ ಆಟ ತುಂಟಾಟಗಳು.. ಮನೆಯಲ್ಲಿ ಮುದ್ದಾಗಿ ಸಾಕಿದ ಗಿಳಿರಾಮನ ದುರಂತ ಸಾವಿನ ಬಗ್ಗೆ.. ಹೀಗೆ ಬರೆಯಬೇಕೆನ್ನುತ್ತವೆ ಮನಸು.. ಬರೆಯಲಾಗುತ್ತಿಲ್ಲ.. ಪದಗಳೇ ಹೊಳೆಯುತ್ತಿಲ್ಲ..
ಹಿಂಬದಿಯ ಸವಾರಳಾಗಿ ಇನಿಯನೊಂದಿಗೆ ಹೋಗುವಾಗ ಜೋರಾಗಿ ಮಳೆಸುರಿಯುವಾಗ, ಬರಹವನು ನೆನೆದೊಮ್ಮೆ ಬಿಕ್ಕಿ ಅಳುತ್ತೇನೆ.. ಮಳೆಯೊಂದಿಗೆ ಕಣ್ಣ ಹನಿಯೂ ಸೇರಿ…ಕೆನ್ನೆಯಿಂದ ಇಳಿಯುತ್ತವೆ.. ಮನಸು ಹಗುರಾಗುತ್ತದೆ.. ನಾಳೆಯಿಂದ ಮತ್ತೆ ಏನಾದರೊಂದು ಬರೆಯಬೇಕು ಎಂದುಕೊಳ್ಳುತ್ತೇನೆ.. ಮನಸಿಗೆ ನೆಮ್ಮದಿಯಾಗುವಂತೆ.. ತೃಪ್ತಿಯಾಗುವಂತೆ ಬರೆಯಬೇಕು.. ನನ್ನೊಳಗಿನ ಭಾವನೆಗಳು ಅಕ್ಷರಗಳ ರೂಪ ಧರಿಸಬೇಕು.. ಮತ್ತೆ ಬರೆಯಬೇಕು.. ಬರೆಯುತ್ತಿದ್ದೇನೆ..

ಪಾಸ್‌ವರ್ಡ್‌ ಮರೆತ್ಹೋಗೋ ಗೀಳು...? ಗೋಳೋ..? ಸಮಸ್ಯೆನಾ.. ಗೊತ್ತಿಲ್ಲ..!

    ಕೆ ಲವು ತಿಂಗಳ ಹಿಂದೆ ಫೋನ್‌ ಬಿದ್ದು ಡಿಸ್‌ಪ್ಲೇ ಹೋಗಿ, ಇರೋ ಬರೋ ನಂಬರುಗಳು ಕಳೆದುಕೊಂಡಿದ್ದಾಯ್ತು. ಅದರ ಜೊತೆಗೆ ನೋಟ್‌ನಲ್ಲಿ ಟೈಪಿಸಿಕೊಂಡಿದ್ದ ಇ-ಮೇಲ್, ಫೇಸ್‌ಬ...