ಬರಹ.. ನಾನು ಇಷ್ಟ ಪಡುವ ಸಂಗಾತಿ.. ಬರಹ ಒಂಟಿತನದ ಜೊತೆಗಾತಿ.. ಬರಹಕ್ಕೆ ಇಂತಿಷ್ಟೇ ವಿಷಯಗಳು ಬೇಕೆಂದಿಲ್ಲ ಎನ್ನುವುದು ನನ್ನ ಅನಿಸಿಕೆ.. ಸೀರಿಯಸ್ ವಿಷಯಗಳ ಬಗ್ಗೆ ಬರೆದು ಓದುಗರನ್ನು ಇನ್ನಷ್ಟು ಸೀರಿಯಸ್ ಮಾಡುವ ಬರಹಗಳು ಬೇಕಾಗಿಲ್ಲ.. ಇಂದಿನವರಿಗೆ ಓದುವ ಪರಿಪಾಠವೂ ಇಲ್ಲ ಬಿಡಿ.. ಓದುತ್ತಾರೆಂದು ಬರೆದರೆ, ಆ ಬರಹದ ಆತ್ಮ ಸೊರಗಿ ಹೋಗಬಹುದು..
ಓದುವವರಿಗೋಸ್ಕರ ಬರೆಯುವ ವರ್ಗ ಒಂದಾದರೆ, ತಮ್ಮತನವನ್ನು ಕಳೆದುಕೊಳ್ಳಲು ಇಷ್ಟಪಡಲಾರದೆ, ಬರಹದಲ್ಲೇ ತೃಪ್ತಿಯನ್ನು ಕಾಣುವ ಕೈಗಳ ವರ್ಗ ಒಂದಿದೆ. ಇಂತಹ ಕೆಟಗರಿಗೆ ಸೇರಿದವಳು ನಾನು..
ನಾ ಬರೆಯುವ ಸಾಲು ನನ್ನ ಮನಸಿನಿಂದ ಬರುವ ಸಾಲುಗಳು, ಎಲ್ಲೋ ಓದಿ ನೆನಪಿಟ್ಟುಕೊಂಡು, ಒಟ್ಟು ಸೇರಿಸಿಕೊಂಡು ಮನೆಕಟ್ಟುವಂತೆ ಬರೆವ ಪದಗಳಲ್ಲಿ ಭಾವುಕತೆಯನ್ನು ತುಂಬಲು ಸಾಧ್ಯವಿಲ್ಲ.. ಮಾತು ನಿರರ್ಗಳವಾದಂತೆ, ಪದಗಳೂ ಕೈಗೆ ಸಿಲುಕಿ, ಕಣ್ಣು ಕುಕ್ಕುವ ಲ್ಯಾಪ್ಟಾಪ್ ಪರದೆಯಲ್ಲಿ(ಈಗೀಗ ಪೆನ್ನು, ಪುಸ್ತಕ ಹುಡುಕಿದರೂ ಸಿಗುವುದಿಲ್ಲ) ಚಂದದ ಪದವಾಗಿ, ಪುಟಗಳಲ್ಲಿ ಪೋಣಿಕೊಂಡಂತಿದ್ದರೆ ಮನಸಿಗೂ ನೆಮ್ಮದಿ..ಆತ್ಮತೃಪ್ತಿಯೂ..
ಗಡಿಬಿಡಿಯ ಕೆಲಸದಲ್ಲೂ ಬರೆಯುವ ಆಸೆ ಇಣುಕಿದರೂ, ಸಮಯ 24 ಅಷ್ಟೇ. ಮೆಟ್ರೋ ಮೌನದಲ್ಲಿ ಆಗಾಗ ನೆನಪಾಗುವ ಸಾಲುಗಳನ್ನು ಬರೆದಿಡಬೇಕೆನಿಸುತ್ತದೆ, ಆದರೆ ತಣ್ಣಗಿನ ಗೂಡಿನೊಳಗಿಂದ ಬೆಚ್ಚನೆಯ ವಾತಾವರಣಕ್ಕೆ ಮರಳುವಾಗ ನೆನಪಾದ ಸಾಲುಗಳೂ ಮಾಯ.. ಯೋಚನಾಲಹರಿಯಲ್ಲಿ ಆ ಸಾಲುಗಳೂ ಮುಳುಗಿರುತ್ತವೆ..
ಯೋಚನೆ ಅಂದಾಗ ನೆನಪು ಬಂತು ನೋಡಿ, ಚಿಕ್ಕವಳಿದ್ದಾಗ ಮನೆಯ ಹತ್ತಿರದ ಗುಡ್ಡದ ಮೇಲಿರುವ ಕಲ್ಲಿನ ಮೇಲೆ ಪರೀಕ್ಷೆಗೆ ಓದಲು ಕುಳಿತರೆ, ಪುಸಕ್ತದ ಹಾಳೆ ಗಾಳಿಗೆ ಹಾರುತ್ತಿತ್ತೇ ಹೊರತು, ಕಣ್ಣುಗಳು ಮಾತ್ರ ಶೂನ್ಯ ದೃಷ್ಟಿಯೊಂದಿಗೆ ಇಂತಹುದೇ ಸಾಲುಗಳನ್ನು ಮನದೊಳಗಡೇ ಬಿತ್ತುತ್ತಿತ್ತು.. ಆಗಲೇ ಬರಹಗಾರ್ತಿಯಾಗಬೇಕೆಂಬ ಕನಸು ಮೊಳೆತಿತ್ತು. ನಾನು ಚಿಕ್ಕವಳಿಂದಾಗಿನಿಂದ ಹಿಡಿದು ಕಾಲೇಜು ಓದುವವರೆಗೂ ಅದೇ ಕಲ್ಲಿನ ಮೇಲೆ ಕುಳಿತು ಓದುವ ನೆಪದಲ್ಲಿ ಜಗತ್ತನ್ನೇ ಮರೆಯುತ್ತಿದ್ದೆ.. ತಮಾಷೆ ಏನಪ್ಪಾ ಅಂದ್ರೆ ಎಂಸಿಜೆ ಮಾಡ್ತಾ ಇದ್ದ ಕಾಲದಲ್ಲಿ ನಾನು ಕುಳಿತುಕೊಳ್ಳುತ್ತಿದ್ದ ಕಲ್ಲಿನ ಮೇಲೆ ಯಾರೋ ಒಬ್ಬ ಐ ಲವ್ ಯೂ ಅಂತ ಒಂದು ಚೀಟಿಯಲ್ಲಿ ಬರೆದು ಫೋನ್ ನಂಬರ್ ಕೂಡ ಬರೆದಿಟ್ಟಿದ್ದ, ಆ ಅಪರಿಚಿತ ಪ್ರಾಣಿ ಯಾರೆಂಬುದು ಇದುವರೆಗೂ ಗೊತ್ತಾಗಿಲ್ಲ, ಹುಡುಕಲೂ ಹೋಗಿಲ್ಲ.. ಹುಡುಕುವ ಕುತೂಹಲವೂ ನನಗಿರಲಿಲ್ಲ.. ಹೀಗೆ ನಡೆದು ಹೋದ ಸಣ್ಣ ಸಣ್ಣ ಘಟನೆಗಳೇ ಮೂಲೆಯಿಂದ ಹೊರಬಂದು ಬರೆಯಲು ಪ್ರೇರೇಪಿಸುತ್ತದೆ.. ಮತ್ತೆ ಮತ್ತೆ..
ಸುಮ್ಮನೆ ಕುಳಿತಾಗ, ಬೇಜಾರಾದಾಗ ಏನಾದ್ರೂ ಬರಿ.. ಬೇಜಾರು ಹೋಗತ್ತೆ ಎಂದು ಸ್ಫೂರ್ತಿ ತುಂಬುವ ಪತಿ. ಪ್ರತಿಬಾರಿ ಬ್ಲಾಗ್ ಬರೆದಾಗಲೂ ನನ್ನ ಬಗ್ಗೆ ಬರಿಯೇ ಎಂದು ಬರೆಯಲು ನೆನಪಿಸುವ ತಮ್ಮ, ಅಕ್ಷರ, ವ್ಯಾಕರಣಗಳು ತಪ್ಪಾದರೂ ಪ್ರತಿರಾತ್ರಿ 10 ಗಂಟೆಯ ಮೇಲೆ, ಎಲ್ಲರೂ ಮಲಗಿದ ಮೇಲೆ ಆ ದಿನ ನಡೆದ ಕೋಪ, ತಾಪವನ್ನೆಲ್ಲಾ ಡೈರಿಯೊಳಗಡೆ ಬರೆದಿಡುತ್ತಿದ್ದ ಅಜ್ಜ, ಬೇಸಿಗೆಯಲ್ಲಿ ಬೆವರಿಳಿಸಿದರೂ, ಮಳೆಗಾಲದಲ್ಲಿ ತಂಪಾಗಿಸುವ ನನ್ನೂರು ಕರಾವಳಿಯ ತೋಟ, ಗದ್ದೆ, ಬಯಲು, ಯಕ್ಷಗಾನ, ಕೋಲ, ನಾಗರ ಪಂಚಮಿ.. ಇಂದಿಗೂ ನೆನಪಿಸಿಕೊಂಡು ಎಂಜಾಯ್ ಮಾಡುವ ಬಾಲ್ಯ ಇವೆಲ್ಲವೂ ಬರಹಕ್ಕೆ ಸ್ಪೂರ್ತಿ ನೀಡುತ್ತದೆ..
ಕೆಲವೊಮ್ಮೆ ಕತ್ತಲರಾತ್ರಿಯಲ್ಲೂ ಮಿನುಗುವ ಬೆಂಗಳೂರು, ಹಗಲಿನ ಬೆಳಕಲ್ಲಿ ಬೆತ್ತಲಾಗಿ, ಅವ್ಯವಸ್ಥೆಗಳ ವಿರಾಟ್ ರೂಪವನ್ನು ತೋರಿಸುವ ಬೆಂದಕಾಳೂರು ಕೂಡಾ ಬರೆಯುವಂತೆ ಪ್ರೇರೇಪಿಸುತ್ತದೆ.
ಖುಷಿಗಳಷ್ಟೇ ಸಾಕೇ..? ಇಲ್ಲ.. ಒಮ್ಮೊಮ್ಮೆ ಮಡುಗಟ್ಟಿದ ದುಃಖ ಅಕ್ಷರ ರೂಪದಲ್ಲಿ ಉಕ್ಕಿ ಬರಲು ಉತ್ತೇಜಿಸುವುದು.. ಎಲ್ಲವನ್ನೂ ಅಕ್ಷರಗಳಲ್ಲಿ ಕಕ್ಕಿದ ಮೇಲೆ ಮಳೆ ನಿಂತು ಹೋದಂಥ ಭಾವ.. ನಿರಾಳತೆ.. ಅನುಭವಿಸಲು ಅದು ಆ ಬರಹಗಾರನಿಗೆ ಮಾತ್ರ ಸಾಧ್ಯ.
ನನ್ನ ಬರಹಗಳನ್ನು ನೋಡಿ ಓದಿದ ಓದುಗರು ಒಮ್ಮೊಮ್ಮೆ ಬರೀತಾ ಇರಿ ಹೀಗೆ ಅನ್ನೊದುಂಟು, ಹಾಗಂದ ಮಾತ್ರಕ್ಕೆ ಬರೆಯಲು ಸಾಧ್ಯವೇ..? ಇಲ್ಲ.. ಓದುಗರಿಗಾಗಿ ಬರೆದರೆ ಆತ್ಮಕ್ಕೂ ಶಾಂತಿ ದಕ್ಕದು.. ಎನ್ನುವುದು ನನ್ನ ಭಾವ.. ನನ್ನೊಳಗಿನ ಭಾವಗಳೇ ಬರವಣಿಗೆಯಾಗಬೇಕು, ಭಾವಗಳೇ ಕೈ ಹಿಡಿದು ಬರೆಸಬೇಕು. ಭಾವಗಳು ತುಂಬಿದ ಬರಹವೇ ನನ್ನೊಳಗೆ ಇನ್ನೂ ಬರೆಯಬೇಕೆಂಬ ಭಾವ ಹುಟ್ಟಿಸುವುದು..
ಅತ್ತಿಯ ಹೂವರಳಲೂ ಕತ್ತಲಾಗಬೇಕಂತೆ..ಹಾಗೇನೆ ಚಂದದ ಪದಗಳು ಅರಳಬೇಕಾದರೆ, ಮನಸಾಗಬೇಕು.. ಭಾವಗಳು ಮೂಡಬೇಕು..