Thursday 27 September 2018

ಸಿಕ್ಕು ಬಿಡಿಸುವ ಹೊತ್ತು..

ಬೆಳಗ್ಗೆ ಆಫೀಸಿಗೆ ಹೊರಡುವ ಧಾವಂತದಲ್ಲಿ ಕೂದಲು ಭರ ಭರನೆ ಕೂದಲು ಬಾಚಿಕೊಳ್ಳುತ್ತಿದೆ. ಹಣಿಗೆಯಲ್ಲಿ ಸಿಕ್ಕುಹಾಕಿಕೊಂಡ ಸಿಕ್ಕಾದ ಕೂದಲು ಬಿಡಿಸಿಕೊಳ್ಳಲಾಗದೇ ಒದ್ದಾಡುತ್ತಿತ್ತು.. ಮತ್ತೆ ಯೋಚನೆಗೆ ಬಿದ್ದೆ.. 

ಚಿಕ್ಕವಳಿರುವಾಗ ನಮ್ಮಮ್ಮ ಬೇಡವೆಂದರೂ ಕೇಳದೆ ಮನೆಯ ಮುಂದಿನ ಮೆಟ್ಟಿಲ ಮೇಲೆ ಕೂರಿಸಿಕೊಂಡು ತಲೆತುಂಬಾ ಶುದ್ಧ ತೆಂಗಿನ ಎಣ್ಣೆ(ಮನೆಯ ಕೊಬ್ಬರಿಯಿಂದ ತೆಗೆದ) ಹಾಕಿ, ಬಾಚಿ ಎರಡು ಜಡೆ ಹೆಣೆದು ತೆಂಗಿನಷ್ಟು ಉದ್ದವೋ? ಕಂಗಿನಷ್ಟು ಉದ್ದವೋ ಎಂದು ಕೇಳುತ್ತಿದ್ದಳು.. ಕಂಗಿನಷ್ಟು ಉದ್ದವಾಗಲಿ ಎಂದು ಎದ್ದು ಓಡಿ ಬಿಡುತ್ತಿದೆ. ಹಣೆಯ ಮೇಲೆ ಎಣ್ಣೆಯ ಪಸೆ ಹರಿದು ಪಾಂಡ್ಸ್ ಪೌಡರಿನೊಂದಿಗೆ ಬೆರೆತು ಹೋಗುತ್ತಿತ್ತು..
ಸಿಕ್ಕು ಬಿಡಿಸುವಾಗಲೆಲ್ಲ ಅಮ್ಮ ಹೇಳುತ್ತಿದ್ದ ಬುದ್ಧಿ ಮಾತುಗಳು ಜೀವನದ ದಾರಿಯನ್ನು ಕಲಿಸಿದ್ದವು. ಅಮ್ಮ ಬಿಚ್ಚಿಡುತ್ತಿದ್ದ ಅವಳ ನೋವಿನೆಳೆಗಳು ಮನಸ್ಸಿನಲ್ಲೇ ಭದ್ರವಾಗಿ ಹೆಣೆದುಕೊಳ್ಳುತ್ತಿದ್ದವು. ನಾನು ಅವಳಂತಾಗಬಾರದೆಂದು ಧೃಢನಿಶ್ಚಯ ಮಾಡಿಕೊಂಡಿದ್ದೆ. ನಾನು ಅಮ್ಮ ಇನ್ನಷ್ಟು ಆತ್ಮೀಯವಾಗಲು, ಇನ್ನಷ್ಟು ಭಾವನೆಗಳನ್ನು ಹಂಚಿಕೊಳ್ಳಲು, ಶಾಲೆಯ ನೆನ್ನೆಯ ವರದಿಗಳನ್ನೆಲ್ಲಾ ಒಪ್ಪಿಸಲು ಕೂದಲು ಬಾಚುವ ಕಾರ್ಯಕ್ರಮವು ವೇದಿಕೆಯಾಗುತ್ತಿತ್ತು ಎಂದರೆ ತಪ್ಪಾಗಲಾರದು.
ಈಗಿನ ಕಾಲದಲ್ಲಿ ಮಕ್ಕಳು ಶಾಲೆಗೆ ಹೊರಡುವುದೇ ಬೆಳ್ಳಂಬೆಳಗ್ಗೆ, ಈಗಿನ ಅಮ್ಮಂದಿರಿಗೆ ಮಕ್ಕಳ ತಲೆಬಾಚುವುದಕ್ಕೂ ಪುರುಸೋತ್ತು ಇರುವುದಿಲ್ಲ. ತರಾತುರಿಯಲ್ಲೇ ಸ್ನ್ಯಾಕ್ಸ್ ಬಾಕ್ಸ್ ಸೇರಿ ಲಂಚ್ ಬಾಕ್ಸ್ ಮಾಡುವುದರೊಳಗೆ ಗೇಟಿನ ಮುಂದೆ ಸ್ಕೂಲ್ ವ್ಯಾನ್ ಬಂದು ಪೀಪಿ ಊದುತ್ತಿರುತ್ತದೆ. ಸಂಜೆಯಾದರೆ ಟ್ಯೂಷನ್ ಕ್ಲಾಸ್ ಮತ್ತೆ ಮಗಳು ಮನೆ ಸೇರುವುದು ರಾತ್ರಿ ಊಟದ ವೇಳೆಗೆ, ಮತ್ತೆ ಬೆಳಗಾದರೆ ಅದೇ ರಾಮಾಯಣ, ಮಗಳ ಸೊಂಪಾದ ಕೂದಲು ಎಣ್ಣೆ ಕಾಣದೇ ಕಂಗೆಟ್ಟು ಹೋಗಿರಬಹುದು..! ಜಿಡ್ಡಿಲ್ಲದ ಬಾಚಣಿಗೆಯೂ ಪಳಪಳನೆ ಕೂದಲ ಅಣಕಿಸುತ್ತಿರಬಹುದು..!
ಕಾಲೇಜು ಹುಡುಗಿಯರ ಕೂದಲ ವಿಷಯಕ್ಕೆ ಬಂದರೇ ಹೇಳುವುದೇ ಬೇಕಾಗಿಲ್ಲ, ಕಂಡೀಷನರ್ ಹಚ್ಚಿಕೊಂಡರೆ ಸಾಕು, ಗಾಳಿಯೊಂದಿಗೆ ಮಾತನಾಡಲು ಶುರು.. ಅಮ್ಮಂದಿರಿಗಂತೂ ಕೆಲಸವೇ ಇಲ್ಲ. ಆಗೋಮ್ಮೆ ಈಗೊಮ್ಮೆ ಎಣ್ಣೆ ಹಚ್ಚಲು ಹೋದರೆ ಅಯ್ಯೋ ಎಣ್ಣೆ ಹಚ್ಚಿಕೊಂಡು ಹೋದರೆ ಹಳ್ಳಿ ಹುಡುಗಿಯೆನ್ನುತ್ತಾರೆನ್ನುವ ಧಿಮಾಕು..! (ಕೂದಲಿನಿಂದಲೇ ಕಣ್ಸೆಳೆಯುವ ನಮ್ಮ ಮಂಗಳೂರಿನ ಮೆಡಿಕಲ್ ಕಾಲೇಜುಗಳಲ್ಲಿನ ಮಲೆಯಾಳಿ ಸುಂದರಿಯರÀ ಕಪ್ಪಾದ ಎಣ್ಣೆಯಿಂದ ತೋಯುವ ಕೂದಲರಾಶಿಯನ್ನೊಮ್ಮೆ ಇವರು ನೋಡಬೇಕು)
ಇನ್ನು ಅಮ್ಮಂದಿರಿಗೆ ಮಗಳೊಂದಿಗೆ ಮಾತನಾಡಲು ಸಮಯವೆಲ್ಲಿ..? ಕಾಲೇಜಿನಿಂದ ಬಂದರೆ ಸಾಕು ಎಡಗೈಯಲ್ಲಿ ಫೋನ್ ಹಿಡಿದುಕೊಂಡು, ತಲೆತಗ್ಗಿಸಿಯೇ ತಿನ್ನುವ ಕಾರ್ಯ ಮಾಡುವವರಿಗೆ ಅಮ್ಮನ ನೋವು ಕಾಣದು..! ಇನ್ನು ಅಮ್ಮನ ಕಿವಿಮಾತು ಕೇಳಿಸಿಕೊಳ್ಳಲು ಸಾಧ್ಯವೇ ಇಲ್ಲ ಬಿಡಿ ಯಾಕೆಂದರೆ, ಎರಡೂ ಇಯರ್‍ಫೋನ್‍ಗಳಿಂದ ಕಿವಿಯೂ ಮುಚ್ಚಿ ಹೋಗಿರುತ್ತದೆ..!
ಮನಸಾದರೆ ಒಮ್ಮೆ ಅಮ್ಮನ ಮುಂದೆ ಕೂದಲು ಹರವಿಬಿಡಿ, ಎಣ್ಣೆಯು ನೆತ್ತಿಗೆ ತಾಕಿದಂತೆ ಮನಸೂ ತಂಪಾಗುತ್ತದೆ.. ದಿನನಿತ್ಯದ ಜಂಜಾಟಗಳಲ್ಲಿ ಸಿಕ್ಕು ಸಿಕ್ಕಾಗಿ ಮುದುಡಿಕೊಂಡಿರುವ ಮನಸು ಹಾಯಾಗಿಬಿಡುತ್ತದೆ. ಜಿಡ್ಡು ಮೆತ್ತಿಕೊಂಡ ಬಾಚಣಿಗೆ ನೋಡಿ ಮತ್ತೆ ಕಪ್ಪು ಕೂದಲು ಒಮ್ಮೆ ನಕ್ಕುಬಿಡುತ್ತದೆ..!
ಅಯ್ಯೋ.. ಆಫೀಸಿಗೆ ಟೈಮ್ ಆಯ್ತು ಎಷ್ಟೊತ್ತು ಮಿರರ್ ಮುಂದೇನೆ ಕೂತಿರ್ತೀಯಾ.. ಅನ್ನೋ ಪತಿಯ ಕೂಗು ಕೇಳಿ..ಮತ್ತೆ ಎಚ್ಚೆತ್ತುಕೊಂಡೆ.. ಅಮ್ಮ ಮತ್ತೆ ನೆನಪಾದಳು..

Thursday 20 September 2018

ಬೆಂಗಳೂರ ಟಾರು ರಸ್ತೆಯಲ್ಲಿ ಕೆ.ಎ.19..

ಹೇ..ಕೆ.ಎ.19.. ಹೌದು ಬೆಂಗಳೂರಿನ ಟಾರು ರಸ್ತೆಗಳಲ್ಲಿ ಕೆ.ಎ.19 ನಂಬರ್ ಪ್ಲೇಟ್ ಇರುವ ಯಾವುದೇ ವಾಹನಗಳು ಕಂಡರೆ ಸಾಕು, ನನ್ನಂತಿರುವ ಕರಾವಳಿಗರಿಗೆ ನಮ್ಮೂರ ಆತ್ಮೀಯರನ್ನೇ ನೋಡಿದಂತಾಗಿ ಹೃದಯ ಅರಳುತ್ತದೆ..

ಕೆಲಸವನ್ನರಸಿಕೊಂಡು ಕರಾವಳಿಯಿಂದ ಬೆಂಗಳೂರಿಗೆ ಬಂದ ತುಳುವರು ಬೆಂಗಳೂರಿನ ಅಲ್ಲಲ್ಲಿ ಚದುರಿಕೊಂಡು, ಬೆಂಗಳೂರ ಜನರ ಮಧ್ಯೆ ಬೆರೆತು ಹೋಗಿರುವಾಗ ಕರಾವಳಿಗರೆಂದು ಗುರುತು ಹಿಡಿಯಲು ಸಾಧ್ಯವಾಗುವುದು ಕೆ.ಎ.19 ಅಥವಾ ತಾಯಿ ಭಾಷೆ ತುಳುವಿನ ಮೂಲಕ..
ಆಫೀಸು, ಶಾಪಿಂಗ್ ಅಂತ ಪತಿಯೊಂದಿಗೆ ಗಾಡಿಯಲ್ಲಿ ಹೊರಟರೆ, ಕೆ.ಎ. 19 ಕಂಡ ತಕ್ಷಣ ಹೇ.. ಮಂಗಳೂರಿನವರು ಎಂದು ಕುಣಿದಾಡಿದಾಕ್ಷಣ ನನ್ನ ಪತಿವರ್ಯ ಹೋ ಹೌದಾ.. ಹಾಗಾದ್ರೆ ನಿಮ್ಮ ಸಂಬಂಧಿಕರೇ ಇರಬಹುದು.. ಹತ್ತಿರ ಹೋಗಿ ಗಾಡಿ ನಿಲ್ಲಿಸ್ತೀನಿ.. ಮಾತಾಡು ಅಂತ ಛೇಡಿಸುವುದುಂಟು..
ಶಾಪಿಂಗ್ ಸಂತೆಯಲ್ಲಿ ಅಲೆದಾಡುವಾಗಲೂ ಅಷ್ಟೇ ತುಳು ಭಾಷೆ ಕೇಳಿಸುತ್ತವೆಯೇನೋ ಎಂದು ಕಿವಿ ‘ಕೊಂಡೆ’ ಮಾಡಿಕೊಂಡು ಆಲಿಸಿದ್ದುಂಟು.. ತುಳು ಕಿವಿಗಪ್ಪಳಿದಾಕ್ಷಣ ಹೃದಯ ವೇಗವಾಗಿ ಬಡಿದುಕೊಳ್ಳುತ್ತದೆ. ಅದ್ಯಾಕೋ ಗೊತ್ತಿಲ್ಲ..
ಬೆಂಗಳೂರಲ್ಲಿದ್ದರೂ ತುಳು, ಕರಾವಳಿಯ ಕಡೆಗೆ ಮನಸ್ಸು ಹಾತೊರೆಯುತ್ತದೆ. ಎಷ್ಟೇ ಬಿಸಿಲಿದ್ದರೂ, ಬೆವರು ಧಾರೆಯಂತೆ ಹರಿದರೂ(ಬೆಂಗಳೂರಿಗರಾದ ನನ್ನವರು ಬೇಸಿಗೆಯಲ್ಲಂತೂ ಮಂಗಳೂರಿಗೆ ಬರುವುದಿಲ್ಲವೆಂದು ಶಪಥ ಮಾಡಿದ್ದಾರೆ) ಬಯಸುವುದು ಮಾತ್ರ ನಮ್ಮ ನೆಲ ಕರಾವಳಿಯನ್ನು..
ಮೊನ್ನೆಯಷ್ಟೇ ಫೇಸ್‍ಬುಕ್ಕಿನಲ್ಲಿ ಮಂಗಳೂರು ಮಲ್ಲಿಗೆಯ ಚಿತ್ರವನ್ನು ನೋಡಿದಾಕ್ಷಣ ಬೆಂಗಳೂರು ಬೀದಿಯಲ್ಲಿ ಮಾರುವ ಮಲ್ಲಿಗೆಯ ರಾಶಿಯಲ್ಲಿ ಮಂಗಳೂರು ಮಲ್ಲಿಗೆಯ ಘಮವನ್ನು ಹುಡುಕಿ ಸೋತುಹೋದೆ, ನಮ್ಮ ಮಂಗಳೂರು ಮಲ್ಲಿಗೆಯ ಘಮ ಯಾವ ಮಲ್ಲಿಗೆಗೂ ಇಲ್ಲವೆಂದು ಅಂದುಕೊಂಡೆ..
ಬೇಸರದ ಸಂಗತಿಯೆಂದರೆ ಎಷ್ಟೋ ಜನ ತುಳು ಭಾಷಿಗರು ಬೆಂಗಳೂರಿನಲ್ಲೇ ನೆಲೆಯೂರಿಕೊಂಡು ಮನೆಯಲ್ಲೇ ಮಕ್ಕಳೊಂದಿಗೆ ಕನ್ನಡ ಭಾಷೆ ಮಾತನಾಡುತ್ತಿದ್ದಾರೆ. ಅಂದರೆ ಬೆಂಗಳೂರಿನಲ್ಲೇ ಹುಟ್ಟಿ ಬೆಳೆದ ತಮ್ಮ ಮಕ್ಕಳಿಗೆ ತುಳು ಭಾಷಿಕರು ಕಲಿಸುವುದು ಕನ್ನಡವನ್ನು.. ಹಾಗಂತ ಕನ್ನಡ ಕಲಿಸಬಾರದೆಂದು ಹೇಳುವುದಿಲ್ಲ. ಕನ್ನಡದೊಂದಿಗೆ ತುಳು ಭಾಷೆಯನ್ನೂ ಕಲಿಸಿದರೆ, ಊರಲ್ಲಿರುವ ಅಜ್ಜ ಅಜ್ಜಿಯಂತೂ ಬೆಂಗಳೂರಲ್ಲಿದ್ರೂ ನನ್ನ ಪುಳ್ಳಿ ತುಳು ಮಾತನಾಡುವುದನ್ನು ಕಲಿತಿದ್ದಾಳೆ/ ಕಲಿತಿದ್ದಾನೆ ಎಂದು ಹೆಮ್ಮೆಯಿಂದ ಹೇಳಿಕೊಳ್ಳಬಹುದು..
ತೆಲುಗು ಭಾಷಿಕರಾದ ನನ್ನ ಪತಿರಾಯ ಎರಡೇ ಎರಡು ಪದ ತುಳು ಕಲಿತಿದ್ದಾರೆ. ಎಂಚ ಉಲ್ಲರ್?. ವನಸ್ ಆಂಡೆ?, ಇಷ್ಟೇ ನನ್ನ ಅಜ್ಜಿಯೊಂದಿಗೆ ಮಾತನಾಡಲು...!

ಪಾಸ್‌ವರ್ಡ್‌ ಮರೆತ್ಹೋಗೋ ಗೀಳು...? ಗೋಳೋ..? ಸಮಸ್ಯೆನಾ.. ಗೊತ್ತಿಲ್ಲ..!

    ಕೆ ಲವು ತಿಂಗಳ ಹಿಂದೆ ಫೋನ್‌ ಬಿದ್ದು ಡಿಸ್‌ಪ್ಲೇ ಹೋಗಿ, ಇರೋ ಬರೋ ನಂಬರುಗಳು ಕಳೆದುಕೊಂಡಿದ್ದಾಯ್ತು. ಅದರ ಜೊತೆಗೆ ನೋಟ್‌ನಲ್ಲಿ ಟೈಪಿಸಿಕೊಂಡಿದ್ದ ಇ-ಮೇಲ್, ಫೇಸ್‌ಬ...