Monday 31 December 2018

ಅರಿವಿನ ಮೊದಲ ಗುರು ನಮ್ಮಜ್ಜ..

ಜಗವೆಲ್ಲ ಹೊಸ ವರ್ಷದ ಸಂಭ್ರಮದಲ್ಲಿದ್ದರೆ, ನಮ್ಮ ಕುಟುಂಬಕ್ಕೆ ಮಾತ್ರ ಹೊಸ ವರ್ಷ ಆಘಾತ ತಂದಿತ್ತು. ಅದೇ ನಮ್ಮೆಲ್ಲರ ಪ್ರೀತಿಯ ಅಜ್ಜನ ಮರಣ. ಜನವರಿಗೆ 2ಕ್ಕೆ ಅಜ್ಜ ನಮ್ಮನ್ನಗಲಿ 2ವರ್ಷ.. ನಮ್ಮೂರು, ಕರಾವಳಿ, ಮಂಗಳೂರು, ಬೆಂಗಳೂರಿನ ಬಗ್ಗೆ ಬರೆದ ನನಗೆ ಅಜ್ಜನ ಬಗ್ಗೆ ಬರೆಯದೇ ಹೋದರೆ ಆದೀತೇ. ನನ್ನಲ್ಲಿ ಬರವಣಿಗೆ, ಓದಿನ ಬಗ್ಗೆ ಆಸಕ್ತಿಯನ್ನು ಹುಟ್ಟಿಸಿದವರೆ ನಮ್ಮಜ್ಜ ಎಂದರೆ ತಪ್ಪಾಗಲಾರದು..

ಮೊದಲನೇಯ ಪ್ರೀತಿಯ ಮೊಮ್ಮಗಳಾಗಿದ್ದ ನನಗೆ ಅಜ್ಜ ಪೇಪರ್‍ನಲ್ಲಿ ಕಟ್ಟಿಸಿಕೊಂಡು ತರುತ್ತಿದ್ದ ಕಡಲೇ, ಚಾಕಲೇಟುಗಳ ಜೊತೆಗೆ ಸಣ್ಣ ಪೇಪರ್‍ನ ತುಂಡುಗಳು ಓದುವ ಗೀಳು ಹತ್ತಿಸಿತ್ತು.  ಎರಡನೇ ಕ್ಲಾಸ್ ಓದಿದ್ದ ತಾತನಿಗೆ ಡೈರಿ ಬರೆಯುವುದೆಂದರೆ ಬಹಳ ಅಚ್ಚುಮೆಚ್ಚು.. ಪ್ರತಿದಿನ ನಡೆದ ಘಟನೆಗಳನ್ನ ಅಕ್ಷರಗಳ ರೂಪದಲ್ಲಿ ಜೋಡಿಸುತ್ತಿದ್ದರು. ತಮಾಷೆಯೆಂದರೆ ಆ ದಿನ ಮಾಡಿ ಕೊಟ್ಟ ತಿಂಡಿಯನ್ನು ಕೂಡ ನನಗಿವತ್ತು ಇಷ್ಟೇ ದೋಸೆ ಹಾಕಿಕೊಟ್ಟಿದ್ದು ಎಂದೂ ತಮ್ಮ ಕೋಪವನ್ನೂ ಅಕ್ಷರಗಳ ಮೂಲಕ ಹೊರಹಾಕುತ್ತಿದ್ದರು ಅಜ್ಜ. ನಾನು, ಚಿಕ್ಕಮಾವ ಡೈರಿಯನ್ನು ಕದ್ದು ಓದಿ ನಕ್ಕಿದ್ದೂ ಇದೆ. ಅಸಹನೆ, ಕೋಪ, ಯೋಚನೆಗಳನ್ನು ಡೈರಿಯ ಮೂಲಕ ಬರೆದಿಡುತ್ತಿದ್ದ ಅವರ ದಿನಚರಿಯನ್ನು ಇಂದಿನ ಕಾಲದಲ್ಲಿ ಪಾಲಿಸುವವರು ತುಂಬಾ ವಿರಳ ಯಾಕೆಂದರೆ, ಕೆಲಸ ಮುಗಿಸಿ ಬರೋವಾಗಲೇ ತಡರಾತ್ರಿ, ಇನ್ನು ಮಲಗುವಾಗ ಎಲ್ಲರ ವಾಟ್ಸ್ಯಾಪ್ ಸ್ಟೇಟಸ್‍ಗಳನ್ನು ನೋಡುವಾಗ ನಿದ್ದೆ ಆವರಿಸುತ್ತದೆ. ಅಲ್ಲವೇ..?
ಓದಿನ ವಿಚಾರಕ್ಕೆ ಬಂದರೆ ಕಾದಂಬರಿ ಓದುವ ಹುಚ್ಚು ನಮ್ಮಜ್ಜನಿಗೆ.. ಚಿಕ್ಕ ಮಾವ ಕಾಲೇಜಿಗೆ ಹೋಗುತ್ತಿದ್ದ ದಿನಗಳಲ್ಲಿ ಲೈಬ್ರೆರಿಯಿಂದ ತರುತ್ತಿದ್ದ ಕಾದಂಬರಿಗಳಿಗೆ ನಮ್ಮೊಳಗೇ ಎಷ್ಟೋ ಜಗಳಗಳಾಗುತ್ತಿದ್ದವು. ಆ ಕಾಲದಲ್ಲಿ ಕರೆಂಟೂ ಇರಲಿಲ್ಲ. ಚಿಮಿಣಿ ದೀಪದ ಬೆಳಕಿನಲ್ಲಿ ಮರದ ಚೇರ್‍ನಲ್ಲಿ, ಟೇಬಲ್ ಮೇಲೆ ಕಾದಂಬರಿಯನ್ನಿಟ್ಟು, ಕಪ್ಪು ಕನ್ನಡಕ ಹಾಕಿ ಪುಸ್ತಕದೊಳಗೆ ಮುಳುಗಿ ಹೋಗುತ್ತಿದ್ದ ಅಜ್ಜನಿಗೆ ಸಮಯದ ಅರಿವೇ ಇರ್ತಾ ಇರ್ಲಿಲ್ಲ.. ಕೆಲವೊಮ್ಮೆ ಮಧ್ಯರಾತ್ರಿ ಎರಡು, ಮೂರು ಗಂಟೆಯೂ ಆಗುತ್ತಿದ್ದದ್ದುಂಟು. ಈಗೀಗ ನಮ್ಗೆ ಓದಲೂ ಟೈಮಿಲ್ಲ, ಲೈಬ್ರೆರಿಯ ಹಾದಿ ಗೊತ್ತಿಲ್ಲ. ಕಾಲೇಜಿನ ದಿನಗಳಲ್ಲಿ ಶಪಥ ಮಾಡಿದ್ದುಂಟು ಜಾಬ್ ಸಿಕ್ಕಮೇಲೆ ಪ್ರತಿ ತಿಂಗಳ ಸಂಬಳದಲ್ಲೂ ಒಂದೊಂದು ಪುಸ್ತಕ ತಗೋಬೇಕು, ಮನೆಯನ್ನೇ ಲೈಬ್ರರಿ ಮಾಡಬೇಕೆನ್ನುವ ಕನಸು. ಎರಡು ವರ್ಷ ಪಾಲಿಸಿದ್ದೆನಷ್ಟೇ. ಕೊಂಡ ಪುಸ್ತಕಗಳನ್ನು ಆಸಕ್ತ ಓದುಗರಿಗೆ ಕೊಟ್ಟು ಎಷ್ಟೋ ಪುಸ್ತಕ ಇಂದಿಗೂ ಹಿಂತಿರುಗಿ ಬಂದಿಲ್ಲ..ಎನ್ನುವ ಸಂಕಟ ಹೊಟ್ಟೆಯೊಳಗೆ ಇನ್ನೂ ಇದೆ.
ಇನ್ನೊಂದು ವಿಷಯ ಹೇಳಬೇಕೆಂದರೆ ನಮ್ಮಜ್ಜ ಅಪ್ಪಟ ಮಲೆನಾಡಿನವರು, ಅಜ್ಜಿ ಹೇಳಿದ ಹಾಗೆ ಶಿವಮೊಗ್ಗದಲ್ಲಿ ಅಜ್ಜನ ಅಮ್ಮ ಇದ್ದಿದ್ದಂತೆ. ಅಜ್ಜನ ಅಪ್ಪ ಅಂದರೆ ನನ್ನ ಮುತ್ತಜ್ಜ ಎರಡನೇ ಮದುವೆಯಾಗಿದ್ದರಂತೆ.. ಅಜ್ಜಿಯನ್ನು ಮದುವೆಯಾದ ಬಳಿಕ ಮರಳಿ ಘಟ್ಟದ ಕೆಳಗೆ ಬಂದ ನಮ್ಮಜ್ಜ ಬೆಳ್ತಂಗಡಿಯ ಗೇರುಕಟ್ಟೆಯ ಶಾಂತಿಕೊಡಿಯಲ್ಲಿ ತಮ್ಮ ಸುದೀರ್ಘ ಜೀವನವನ್ನು ಕಳೆದಿದ್ದಾರೆ. ಹೇಳಬೇಕೆಂದರೆ ನಮ್ಮಜ್ಜ ಅಪ್ಪಟ ಕೃಷಿಕ ಒಂದು ರೀತಿಯಲ್ಲಿ ಅಜಾನುಬಾಹು. ಮುಂಜಾನೆ ಅವರನ್ನು ಕಾಣುತ್ತಿದ್ದುದೇ ಒಂದು ಕೈಯಲ್ಲಿ ಹಾರೆ ಅಥವಾ ಗುದ್ದಲಿ, ಬಿಳಿ ಪಂಚೆಯಲ್ಲಿ. . ಸೂರ್ಯ ಎದ್ದು ಸ್ವಲ್ಪ ದೂರ ಹೋದ ನಂತರವೇ ತೋಟದಿಂದ ಬಂದು ಕೈಕಾಲು ತೊಳೆದು ಅವರದೇ ದೊಡ್ಡದಾದ ಸ್ಟೀಲ್ ಲೋಟದಲ್ಲಿ ಚಹಾ, ತಿಂಡಿ ತಂದಿಟ್ಟು, ಅದನ್ನು ತಿಂದರೆಂದರೆ ಬೆಳಗ್ಗಿನ ಕೆಲಸ ಅರ್ಧ ಆಗಿಹೋಗುತ್ತಿತ್ತು, ಆದಿನ ಕೊಯ್ದ ತರಕಾರಿಯನ್ನು ಒಂದು ಚೀಲದೊಳಗೆ ಹಾಕಿ ಬಿಳಿ ಪಂಚೆ, ಬಿಳಿ ಶರಟು ಹಾಕಿ ಅಂಗಡಿಗೆ ಹೊರಟರೆಂದರೆ ಮರಳಿ ಬರುವಾಗ ಮಕ್ಕಳಿಗೆಂದೇ ಕಡಲೇ ಅಥವಾ ಚಾಕಲೇಟು ಮಾಮೂಲಿ. ತರದೇ ಹೋದರೆ, ಮರದ ಟೇಬಲ್‍ನ ಕಪಾಟಿನೊಳಗೆ ಕೀ ಹಾಕಿದರೆಂದರೆ ಚಾಕಲೇಟು ಅದರಲ್ಲಿ ಇದ್ದೇ ಇರುತ್ತಿತ್ತು.
ಸ್ವಲ್ಪ ದೊಡ್ಡವರಾದ ಮೇಲೆ ನಮ್ಮನ್ನೂ ಅಲಸಂದೆ ಕೀಳಲು, ನೀರು ಹಾಕಲು ಕರೆದುಕೊಂಡು ಹೋಗ್ತಾ ಇದ್ದ ನಮ್ಮಜ್ಜನಿಗೆ ಮನಸ್ಸಲ್ಲೇ ಎಷ್ಟು ಬೈಯುತ್ತಿದ್ದೆನೋ ಗೊತ್ತಿಲ್ಲ, ಹೊಟ್ಟೆಯೊಳಗೆ ಹುಳ ಚುರು ಚುರು ಎನ್ನುತ್ತಿದ್ದಂತೆ ಆಯ್ತಾ.. ಆಯ್ತಾ, ಸಾಕಾ.. ಅಜ್ಜಾ ಎನ್ನುವ ಮಾತುಗಳು ಅಳುಮುಖದೊಂದಿಗೇ ಬರುತ್ತಿತ್ತು. ಅಜ್ಜ ಸಾಕು ಎಂದರೆ ಸಾಕು ಅಬ್ಬಾ ಎಂದು ಮನೆಗೆ ಓಡುತ್ತಿದ್ದವು. ಬೆಳಗ್ಗೆಯಿಂದ ಸೂರ್ಯ ಮುಳುಗಿ ಇನ್ನೇನು ಕಾಣುತ್ತಿಲ್ಲ ಕತ್ತಲು ಅನ್ನೋವರೆಗೂ ತೋಟದಲ್ಲೇ ಕಳೆಯುತ್ತಿದ್ದರು ನಮ್ಮಜ್ಜ.
ನಮ್ಮ ಅಮ್ಮ, ಚಿಕ್ಕಮ್ಮ, ಮಾವಂದಿರೆಲ್ಲಾ ಚಿಕ್ಕವರಿರಬೇಕಾದರೆ ತುಂಬಾ ಜೋರಿದ್ದರಂತೆ ಅಜ್ಜ. ಒಮ್ಮೆ ನಾನು ಪ್ರೈಮರಿಯಲ್ಲಿ ಓದುತ್ತಿದ್ದಾಗ ಗಣಿತ ಹೇಳಿಕೊಡುತ್ತಿದ್ದ ಚಿಕ್ಕಮ್ಮ ಸ್ಕೇಲ್‍ನಿಂದ ಹೊಡೆದಿದ್ದರು, ಆಕಾಶ ಭೂಮಿ ಒಂದಾಗುವಂತೆ ಅತ್ತಿದ್ದನ್ನು ನೋಡಿ ನಮ್ಮಜ್ಜ ಇನ್ನುಮೇಲೆ ಯಾರಾದ್ರೂ ಹೊಡೆದ್ರೆ ಜಾಗೃತೆ ಎಂದು ಬೈದಿದ್ದರು. ಅಂದೇ ಕೊನೆ ಇದುವರೆಗೂ ಯಾರು ನನ್ನ ಹೊಡೆದದ್ದಿಲ್ಲ. ಅಷ್ಟು ಮುದ್ದಿನಿಂದ ನೋಡಿಕೊಂಡಿದ್ದರು ಮೊಮ್ಮಗಳನ್ನು. ವಯಸ್ಸಾಗುತ್ತಿದ್ದಂತೆ ಸ್ವಲ್ಪ ಸ್ವಲ್ಪವೇ ಕೋಪ, ತಾಪಗಳೆಲ್ಲ ಕಡಿಮೆಯಾಗುತ್ತಿತ್ತು. ಒಂದೊಂದೇ ಹಲ್ಲು ಬೀಳುತ್ತಿತ್ತು. ಅಜ್ಜ ಪ್ರೀತಿಯಿಂದ ನನ್ನನ್ನು ಬಂಗಾರು ಎಂದು ಕರೀತಿದ್ರು. ಕಾಲೇಜು ಓದುತ್ತಿರುವಾಗ ಒಮ್ಮೆ ಬಸ್ಸಿಳಿದು ರೋಡು ದಾಟುತ್ತಿದ್ದೆ, ನಮ್ಮ ಬಸ್‍ಸ್ಟಾಪ್‍ನಲ್ಲೊಂದು ಪುಟ್ಟ ಅಂಗಡಿ, ಮೂರ್ನಲ್ಕು ಆಟೋ ರಿಕ್ಷಾ, ಸಂಜೆಯಾದರೆ ಮಾತುಕತೆಗೆ ಒಂದಷ್ಟು ಜನ ಸೇರಿರುತ್ತಿದ್ದರು. ಆ ಸಂಜೆ ನಮ್ಮ ಅಜ್ಜ ಅಲ್ಲಿದ್ದಿದ್ದು ನೋಡಿರಲಿಲ್ಲ, ಅವರೇ ನನ್ನನ್ನು ನೋಡಿ ಬಂಗರೂ ಎಂದು ಜೋರಾಗಿ ಕರೆದಿದ್ದರು, ಎಲ್ಲರಿಗೂ ಕೇಳಿಸಿತ್ತು.. ಆಮೇಲಿಂದ ಅಲ್ಲಿ ಎಲ್ಲರೂ ನನ್ನನ್ನು ಬಂಗರೂ ಎಂದೇ ಕರೆಯುತ್ತಾರೆ, ಈಗಲೂ ಕೂಡಾ.. ಅಜ್ಜ ಉಳಿಸಿಹೊದ ಹಸಿರಾದ ನೆನಪುಗಳು..
ವಯಸ್ಸಾದಂತೆ ವಯೋಸಹಜ ಖಾಯಿಲೆ ಆವರಿಸಿಬಿಟ್ಟಿತ್ತು.. ಹೃದಯದ ಸಮಸ್ಯೆ ಬೇರೆ, ಕೊನೆಗಾಲದಲ್ಲಿ ಡಯಾಬಿಟಿಸ್ ಕೂಡಾ ಕಿತ್ತು ತಿನ್ನಲು ಬಂದಿತ್ತು. ಒಂದು ಪಾಶ್ರ್ವ ಬಲವಿಲ್ಲದಂತಾಗಿತ್ತು. ಆದರೂ ಒಂದೇ ಕೈಯಲ್ಲಿ ಹಾರೆ, ಗುದ್ದಲಿ ಹಿಡಿದು ನಡೆಯುತ್ತಿದ್ದರು. ಸ್ವಲ್ಪ ಹಠವೂ ಜಾಸ್ತಿಯಾಗಿತ್ತು. ವಯಸ್ಸಾದಂತೆ ಮತ್ತೆ ಮಕ್ಕಳಂತಾಗುತ್ತಾರೆ ಎಂದು ಮಾವ ಹೇಳಿದ್ದ ನೆನಪು.. ನಮ್ಮಜ್ಜ ಸ್ವಲ್ಪ ಯಡಿಯೂರಪ್ಪನವರನ್ನು ಹೋಲುತ್ತಿದ್ದುದರಿಂದ ಯಡಿಯೂರಪ್ಪ ಎಂದು ಹೇಳಿ ನಗಿಸುತ್ತಿದ್ದೆವು, ಬೊಚ್ಚು ಬಾಯಲ್ಲಿ ಒಂದೇ ಹಲ್ಲು ಮಿನುಗುತ್ತಿತ್ತು ಕೂಡಾ. ಡಯಾಬಿಟೀಸ್ ಬಂದ ಮೇಲೆ ಎರಡು ಹೊತ್ತು ಚಪಾತಿ ಅಭ್ಯಾಸವಾಗಿಬಿಟ್ಟಿತ್ತು. ಅದೂ ನಾನು ಮಾಡುವ ಆಕಾರವಿರದ ಚಪಾತಿಯೆಂದರೆ ಸ್ವಲ್ಪ ಇಷ್ಟವೇ.. ಮಾವನೂ ನಾನು ಅಜ್ಜಿ ಮನೆಗೆ ಹೋದರೆ ಸಾಕು, ಅಜ್ಜನಿಗೆ ಇವತ್ತು ನೀನೇ ಚಪಾತಿ ಮಾಡು ಎಂದು ಅವರ ಕೆಲಸ ನನಗೇ ವರ್ಗಾಯಿಸುತ್ತಿದ್ದರು. ಪಾಶ್ರ್ವವಾಯು ಇದ್ದುದರಿಂದ ಕೈ ಕಾಲಿನ ಉಗುರುಗಳನ್ನೂ ಮೊಮ್ಮಕ್ಕಳೇ ಒಮ್ಮೊಮ್ಮೆ ತೆಗೆಯುತ್ತಿದ್ದೆವು. ಕೊನೆಗಾಲದಲ್ಲಿ ಮಗುವಿನಂತಾಗಿದ್ದರು ನಮ್ಮಜ್ಜ. ಅಂಗಡಿಗೆ ಹೋಗಲು ಕಾಲು ತಡವರಿಸುತ್ತಿದ್ದುದರಿಂದ ಮನೆಯಲ್ಲೇ ಚಡಪಡಿಸುತ್ತಿದ್ದರು ಪಾಪ.. ಅಜ್ಜಿ, ಮಾವನ ಕಣ್ಣು ತಪ್ಪಿಸಿ ಬೀಡಿ ಸೇದುತ್ತಿದ್ದರು.
ಕದ್ದು ಬೀಡಿ ಸೇದಿ ತೆಂಗಿನಮರವನ್ನೇ ಸುಟ್ಟು ಹಾಕಿದ್ದರು..! ಅಂದು ನಡೆದಿದ್ದು ಇಷ್ಟೇ ಮನೆಯ ಕೆಳಗೆ ಶೆಡ್‍ನಲ್ಲಿ ಬೀಡಿ ಸೇದಲು ಹೋಗಿ, ಉಳಿದ ಬೀಡಿಯ ತುಂಡನ್ನು ಹೊರಗೆ ಎಸೆದಿದ್ದರು. ಮಟ ಮಟ ಮಧ್ಯಾಹ್ನ ಬೇರೆ ಬಿಸಿಲಿಗೆ ಕಾದ ಹುಲ್ಲಿಗೆ ಕಿಡಿ ಅಂಟಿಕೊಂಡು ಕೆಳಗೆ ಬಾಗಿದ್ದ ತೆಂಗಿನ ಗರಿಗೆ ಅಂಟಿಕೊಂಡ ಬೆಂಕಿ ತೆಂಗಿನ ಮರವನ್ನು ಏರಿತ್ತು. ಬಿಸಿಲಿಗೆ ಬೆಂಕಿ ಧಗಧಗನೇ ಉರಿದಿತ್ತು. ಈ ವಿಷಯ ನಮಗೆ ಗೊತ್ತಾಗಿದ್ದರೂ ಅಜ್ಜನನ್ನು ಕೇಳಲು ಹೋಗಿರಲಿಲ್ಲ. ಅಷ್ಟರಮಟ್ಟಿಗೆ ಮೂರನೇ ಮಾವ, ಅಜ್ಜಿ ಅಜ್ಜನನ್ನು ಮಗುವಿನಂತೆ ನೋಡಿಕೊಂಡಿದ್ದರು. ಮಕ್ಕಳು ಮೊಮ್ಮಕ್ಕಳು ಅಜ್ಜಿ ಮನೆಗೆ ಹೋದರೆ ಸಾಕು ಖುಷಿಯಿಂದ ಮಾತನಾಡುತ್ತಾ ಇರುತ್ತಿದ್ದರು ಅಜ್ಜ, ಮನೆಗೆ ಕಾಲಿಟ್ಟ ತಕ್ಷಣವೇ ಕೆನ್ನೆಗೊಂದು ಮುತ್ತು ಕೊಡುತ್ತಿದ್ದರು ನಮ್ಮಜ್ಜ, ಹೊರಡುತ್ತಿದ್ದಂತೆ ಕಣ್ಣು ಕೆಂಪಾಗಿ ಅಳು ಉಕ್ಕಿ ಬಂದು ಕಣ್ಣೀರು ಇಳಿಯುತ್ತಿತ್ತು.
ಆ ದಿನ ಕೂಡ ಹೀಗೆ ಆಗಿತ್ತು. ಕ್ರಿಸ್‍ಮಸ್ ರಜಕ್ಕೆಂದು ನಾನು ಸೇರಿ ಮೂರು ಮೊಮ್ಮಕ್ಕಳು ಅಜ್ಜಿ ಮನೆಯಲ್ಲಿದ್ದೆವು. ಹೊಸ ವರ್ಷದಂದು ಕಾಲೇಜಿಗೆ ರಜೆ ಇತ್ತು, ಆ ದಿನ ಅಜ್ಜನಿಗೆ ನಾನೇ ಚಪಾತಿ ಮಾಡಿಕೊಟ್ಟಿದ್ದೆ, ತಂಗಿಯೊಬ್ಬಳು ಅಜ್ಜನಿಗೆ ಚಹಾ ತಿಂಡಿ ಕೊಟ್ಟಿದ್ದಳು, ಹಿಂದಿನ ದಿನ ಕಾಲ್ಬೆರಳು, ಕೈಯ ಉಗುರು ಕೂಡಾ ತೆಗೆದಿದ್ದವು. ಆ ದಿನ ಮೂವರೂ ಅವರವರ ಮನೆಗೆ ಹೊರಟಿದ್ದೆವು ಜನವರಿ 1, ಅಂದೂ ತಾತ ಅತ್ತಿದ್ದರು.. ಭಾರವಾದ ಹೃದಯದಿಂದಲೇ ಹೊರಟಿದ್ದೆವು. ಆ ದಿನ ಮಾತ್ರೆಗಳು ಮುಗಿದಿದ್ದರೂ ಮಾವನಿಗೆ ಹೇಳಿರಲಿಲ್ಲ ಅಜ್ಜ, ಸ್ವಲ್ಪ ಎದೆನೋವು ಎಂದು ಹೇಳಿದಾಗಲೇ ಮಾವನಿಗೆ ಗೊತ್ತಾಗಿದ್ದು, ರಾತ್ರಿ ಊಟ ಮುಗಿಸಿ ಮಲಗಿದ್ದಂತೆ, ಮೂರು ಗಂಟೆ ರಾತ್ರಿಗೆ ಹೃದಯಾಘಾತವಾಗಿತ್ತು. ಮಾವ, ಅಜ್ಜಿ ಪಕ್ಕದಲ್ಲೇ ಕಳೆದಿದ್ದರು, ಫೋನ್ ಬಂದಿತ್ತು.. ಗಡಿಬಿಡಿಯಿಂದಲೇ ಧಾವಿಸಿದ್ದೆವು..ನಿಶ್ಚಲವಾಗಿ ಬಿಳಿಯ ಹೊದಿಕೆಯಲ್ಲಿ ಮಲಗಿದ್ದರು ನಮ್ಮಜ್ಜ..

ಪಾಸ್‌ವರ್ಡ್‌ ಮರೆತ್ಹೋಗೋ ಗೀಳು...? ಗೋಳೋ..? ಸಮಸ್ಯೆನಾ.. ಗೊತ್ತಿಲ್ಲ..!

    ಕೆ ಲವು ತಿಂಗಳ ಹಿಂದೆ ಫೋನ್‌ ಬಿದ್ದು ಡಿಸ್‌ಪ್ಲೇ ಹೋಗಿ, ಇರೋ ಬರೋ ನಂಬರುಗಳು ಕಳೆದುಕೊಂಡಿದ್ದಾಯ್ತು. ಅದರ ಜೊತೆಗೆ ನೋಟ್‌ನಲ್ಲಿ ಟೈಪಿಸಿಕೊಂಡಿದ್ದ ಇ-ಮೇಲ್, ಫೇಸ್‌ಬ...