Sunday 19 May 2019

ಬರಹ ಹುಟ್ಟುವ ಪರಿ ಹೀಗೆ..


        ಬರಹ.. ನಾನು ಇಷ್ಟ ಪಡುವ ಸಂಗಾತಿ.. ಬರಹ ಒಂಟಿತನದ ಜೊತೆಗಾತಿ.. ಬರಹಕ್ಕೆ ಇಂತಿಷ್ಟೇ ವಿಷಯಗಳು ಬೇಕೆಂದಿಲ್ಲ ಎನ್ನುವುದು ನನ್ನ ಅನಿಸಿಕೆ.. ಸೀರಿಯಸ್ ವಿಷಯಗಳ ಬಗ್ಗೆ ಬರೆದು ಓದುಗರನ್ನು ಇನ್ನಷ್ಟು ಸೀರಿಯಸ್ ಮಾಡುವ ಬರಹಗಳು ಬೇಕಾಗಿಲ್ಲ.. ಇಂದಿನವರಿಗೆ ಓದುವ ಪರಿಪಾಠವೂ ಇಲ್ಲ ಬಿಡಿ.. ಓದುತ್ತಾರೆಂದು ಬರೆದರೆ, ಆ ಬರಹದ ಆತ್ಮ ಸೊರಗಿ ಹೋಗಬಹುದು..
   ಓದುವವರಿಗೋಸ್ಕರ ಬರೆಯುವ ವರ್ಗ ಒಂದಾದರೆ, ತಮ್ಮತನವನ್ನು ಕಳೆದುಕೊಳ್ಳಲು ಇಷ್ಟಪಡಲಾರದೆ, ಬರಹದಲ್ಲೇ ತೃಪ್ತಿಯನ್ನು ಕಾಣುವ ಕೈಗಳ ವರ್ಗ ಒಂದಿದೆ. ಇಂತಹ ಕೆಟಗರಿಗೆ ಸೇರಿದವಳು ನಾನು..

      ನಾ ಬರೆಯುವ ಸಾಲು ನನ್ನ ಮನಸಿನಿಂದ ಬರುವ ಸಾಲುಗಳು, ಎಲ್ಲೋ ಓದಿ ನೆನಪಿಟ್ಟುಕೊಂಡು, ಒಟ್ಟು ಸೇರಿಸಿಕೊಂಡು ಮನೆಕಟ್ಟುವಂತೆ ಬರೆವ ಪದಗಳಲ್ಲಿ ಭಾವುಕತೆಯನ್ನು ತುಂಬಲು ಸಾಧ್ಯವಿಲ್ಲ.. ಮಾತು ನಿರರ್ಗಳವಾದಂತೆ, ಪದಗಳೂ ಕೈಗೆ ಸಿಲುಕಿ, ಕಣ್ಣು ಕುಕ್ಕುವ ಲ್ಯಾಪ್‍ಟಾಪ್ ಪರದೆಯಲ್ಲಿ(ಈಗೀಗ ಪೆನ್ನು, ಪುಸ್ತಕ ಹುಡುಕಿದರೂ ಸಿಗುವುದಿಲ್ಲ) ಚಂದದ ಪದವಾಗಿ, ಪುಟಗಳಲ್ಲಿ ಪೋಣಿಕೊಂಡಂತಿದ್ದರೆ ಮನಸಿಗೂ ನೆಮ್ಮದಿ..ಆತ್ಮತೃಪ್ತಿಯೂ..

   ಗಡಿಬಿಡಿಯ ಕೆಲಸದಲ್ಲೂ ಬರೆಯುವ ಆಸೆ ಇಣುಕಿದರೂ, ಸಮಯ 24 ಅಷ್ಟೇ. ಮೆಟ್ರೋ ಮೌನದಲ್ಲಿ ಆಗಾಗ ನೆನಪಾಗುವ ಸಾಲುಗಳನ್ನು ಬರೆದಿಡಬೇಕೆನಿಸುತ್ತದೆ, ಆದರೆ ತಣ್ಣಗಿನ ಗೂಡಿನೊಳಗಿಂದ ಬೆಚ್ಚನೆಯ ವಾತಾವರಣಕ್ಕೆ ಮರಳುವಾಗ ನೆನಪಾದ ಸಾಲುಗಳೂ ಮಾಯ.. ಯೋಚನಾಲಹರಿಯಲ್ಲಿ ಆ ಸಾಲುಗಳೂ ಮುಳುಗಿರುತ್ತವೆ.. 

    ಯೋಚನೆ ಅಂದಾಗ ನೆನಪು ಬಂತು ನೋಡಿ, ಚಿಕ್ಕವಳಿದ್ದಾಗ ಮನೆಯ ಹತ್ತಿರದ ಗುಡ್ಡದ ಮೇಲಿರುವ ಕಲ್ಲಿನ ಮೇಲೆ ಪರೀಕ್ಷೆಗೆ ಓದಲು ಕುಳಿತರೆ, ಪುಸಕ್ತದ ಹಾಳೆ ಗಾಳಿಗೆ ಹಾರುತ್ತಿತ್ತೇ ಹೊರತು, ಕಣ್ಣುಗಳು ಮಾತ್ರ ಶೂನ್ಯ ದೃಷ್ಟಿಯೊಂದಿಗೆ ಇಂತಹುದೇ ಸಾಲುಗಳನ್ನು ಮನದೊಳಗಡೇ ಬಿತ್ತುತ್ತಿತ್ತು.. ಆಗಲೇ ಬರಹಗಾರ್ತಿಯಾಗಬೇಕೆಂಬ ಕನಸು ಮೊಳೆತಿತ್ತು. ನಾನು ಚಿಕ್ಕವಳಿಂದಾಗಿನಿಂದ ಹಿಡಿದು ಕಾಲೇಜು ಓದುವವರೆಗೂ ಅದೇ ಕಲ್ಲಿನ ಮೇಲೆ ಕುಳಿತು ಓದುವ ನೆಪದಲ್ಲಿ ಜಗತ್ತನ್ನೇ ಮರೆಯುತ್ತಿದ್ದೆ.. ತಮಾಷೆ ಏನಪ್ಪಾ ಅಂದ್ರೆ ಎಂಸಿಜೆ ಮಾಡ್ತಾ ಇದ್ದ ಕಾಲದಲ್ಲಿ ನಾನು ಕುಳಿತುಕೊಳ್ಳುತ್ತಿದ್ದ ಕಲ್ಲಿನ ಮೇಲೆ ಯಾರೋ ಒಬ್ಬ ಐ ಲವ್ ಯೂ ಅಂತ ಒಂದು ಚೀಟಿಯಲ್ಲಿ ಬರೆದು ಫೋನ್ ನಂಬರ್ ಕೂಡ ಬರೆದಿಟ್ಟಿದ್ದ, ಆ ಅಪರಿಚಿತ ಪ್ರಾಣಿ ಯಾರೆಂಬುದು ಇದುವರೆಗೂ ಗೊತ್ತಾಗಿಲ್ಲ, ಹುಡುಕಲೂ ಹೋಗಿಲ್ಲ.. ಹುಡುಕುವ ಕುತೂಹಲವೂ ನನಗಿರಲಿಲ್ಲ.. ಹೀಗೆ ನಡೆದು ಹೋದ ಸಣ್ಣ ಸಣ್ಣ ಘಟನೆಗಳೇ ಮೂಲೆಯಿಂದ ಹೊರಬಂದು ಬರೆಯಲು ಪ್ರೇರೇಪಿಸುತ್ತದೆ.. ಮತ್ತೆ ಮತ್ತೆ..
       ಸುಮ್ಮನೆ ಕುಳಿತಾಗ, ಬೇಜಾರಾದಾಗ ಏನಾದ್ರೂ ಬರಿ.. ಬೇಜಾರು ಹೋಗತ್ತೆ ಎಂದು ಸ್ಫೂರ್ತಿ ತುಂಬುವ ಪತಿ. ಪ್ರತಿಬಾರಿ ಬ್ಲಾಗ್ ಬರೆದಾಗಲೂ ನನ್ನ ಬಗ್ಗೆ ಬರಿಯೇ ಎಂದು ಬರೆಯಲು ನೆನಪಿಸುವ ತಮ್ಮ, ಅಕ್ಷರ, ವ್ಯಾಕರಣಗಳು ತಪ್ಪಾದರೂ ಪ್ರತಿರಾತ್ರಿ 10 ಗಂಟೆಯ ಮೇಲೆ, ಎಲ್ಲರೂ ಮಲಗಿದ ಮೇಲೆ ಆ ದಿನ ನಡೆದ ಕೋಪ, ತಾಪವನ್ನೆಲ್ಲಾ ಡೈರಿಯೊಳಗಡೆ ಬರೆದಿಡುತ್ತಿದ್ದ ಅಜ್ಜ, ಬೇಸಿಗೆಯಲ್ಲಿ ಬೆವರಿಳಿಸಿದರೂ, ಮಳೆಗಾಲದಲ್ಲಿ ತಂಪಾಗಿಸುವ ನನ್ನೂರು ಕರಾವಳಿಯ ತೋಟ, ಗದ್ದೆ, ಬಯಲು, ಯಕ್ಷಗಾನ, ಕೋಲ, ನಾಗರ ಪಂಚಮಿ.. ಇಂದಿಗೂ ನೆನಪಿಸಿಕೊಂಡು ಎಂಜಾಯ್ ಮಾಡುವ ಬಾಲ್ಯ ಇವೆಲ್ಲವೂ ಬರಹಕ್ಕೆ ಸ್ಪೂರ್ತಿ ನೀಡುತ್ತದೆ..
    ಕೆಲವೊಮ್ಮೆ ಕತ್ತಲರಾತ್ರಿಯಲ್ಲೂ ಮಿನುಗುವ ಬೆಂಗಳೂರು, ಹಗಲಿನ ಬೆಳಕಲ್ಲಿ ಬೆತ್ತಲಾಗಿ, ಅವ್ಯವಸ್ಥೆಗಳ ವಿರಾಟ್ ರೂಪವನ್ನು ತೋರಿಸುವ ಬೆಂದಕಾಳೂರು ಕೂಡಾ ಬರೆಯುವಂತೆ ಪ್ರೇರೇಪಿಸುತ್ತದೆ. 
      ಖುಷಿಗಳಷ್ಟೇ ಸಾಕೇ..? ಇಲ್ಲ.. ಒಮ್ಮೊಮ್ಮೆ ಮಡುಗಟ್ಟಿದ ದುಃಖ ಅಕ್ಷರ ರೂಪದಲ್ಲಿ ಉಕ್ಕಿ ಬರಲು ಉತ್ತೇಜಿಸುವುದು.. ಎಲ್ಲವನ್ನೂ ಅಕ್ಷರಗಳಲ್ಲಿ ಕಕ್ಕಿದ ಮೇಲೆ ಮಳೆ ನಿಂತು ಹೋದಂಥ ಭಾವ.. ನಿರಾಳತೆ.. ಅನುಭವಿಸಲು ಅದು ಆ ಬರಹಗಾರನಿಗೆ ಮಾತ್ರ ಸಾಧ್ಯ.
     ನನ್ನ ಬರಹಗಳನ್ನು ನೋಡಿ ಓದಿದ ಓದುಗರು ಒಮ್ಮೊಮ್ಮೆ ಬರೀತಾ ಇರಿ ಹೀಗೆ ಅನ್ನೊದುಂಟು, ಹಾಗಂದ ಮಾತ್ರಕ್ಕೆ ಬರೆಯಲು ಸಾಧ್ಯವೇ..? ಇಲ್ಲ.. ಓದುಗರಿಗಾಗಿ ಬರೆದರೆ ಆತ್ಮಕ್ಕೂ ಶಾಂತಿ ದಕ್ಕದು.. ಎನ್ನುವುದು ನನ್ನ ಭಾವ.. ನನ್ನೊಳಗಿನ ಭಾವಗಳೇ ಬರವಣಿಗೆಯಾಗಬೇಕು, ಭಾವಗಳೇ ಕೈ ಹಿಡಿದು ಬರೆಸಬೇಕು. ಭಾವಗಳು ತುಂಬಿದ ಬರಹವೇ ನನ್ನೊಳಗೆ ಇನ್ನೂ ಬರೆಯಬೇಕೆಂಬ ಭಾವ ಹುಟ್ಟಿಸುವುದು.. 
 ಅತ್ತಿಯ ಹೂವರಳಲೂ ಕತ್ತಲಾಗಬೇಕಂತೆ..ಹಾಗೇನೆ ಚಂದದ ಪದಗಳು ಅರಳಬೇಕಾದರೆ, ಮನಸಾಗಬೇಕು.. ಭಾವಗಳು ಮೂಡಬೇಕು..  

Wednesday 1 May 2019

ದೇವಪ್ಪಣ್ಣನ ಅಂಗಡಿ..



ಸುಮಾರು 20 ವರ್ಷಗಳ ಹಿಂದೆ ನಮ್ಮೂರು ಅಷ್ಟೇನೂ ಪ್ರಗತಿ ಕಾಣದ ಊರು. ಮಂಗಳೂರಿನಿಂದ ಸುಮಾರು 23 ಕಿಲೋ.ಮೀ ದೂರದಲ್ಲಿದ್ದ ಪುಟ್ಟ ಊರು ಮುಡಿಪು. ಆ ಕಡೆಯಿಂದ ವಿಟ್ಲ, ಈ ಕಡೆ ಬಿಸಿರೋಡ್, ಇನ್ನೊಂದು ಕಡೆ ಮಂಗಳೂರು ಈ ಮೂರು ಪಟ್ಟಣಗಳಿಗೆ ಕೊಂಡಿಯಂತಿರುವ ಊರು ನಮ್ಮೂರು.
ಮುಡಿಪು ಎಂಬ ಊರನ್ನು ಗುರುತಿಸಲು ಮಧ್ಯದಲ್ಲಿ ಒಂದು ಅರಳೀಮರದ ಕಟ್ಟೆ, ಅದರ ಸುತ್ತಲೂ ಕಟ್ಟೆಯಂದನ್ನು ಕಟ್ಟಿ ಬಸ್ಸಿಗಾಗಿ ಕಾದು ನಿಲ್ಲುವ ಪ್ರಯಾಣಿಕರಿಗೆ ಆಸರೆಯಾಗಿಸಿದ್ದರು. ಪ್ರತಿ ವರ್ಷವೂ ಗಣೇಶಚತುರ್ಥಿಯಂದು ಆ ಕಟ್ಟೆಗೆ ಬಣ್ಣ ಕೂಡಾ ಬಳಿಯುತ್ತಾರೆ. ಇಂದಿಗೂ ಕೂಡಾ. 

ಇನ್ನೊಂದು ಆ ಕಾಲದ ಗುರುತೆಂದರೆ ದೇವಪ್ಪಣ್ಣನ ಅಂಗಡಿ, ಕುರ್ನಾಡು ಗ್ರಾಮಕ್ಕೆ ಮಾತ್ರವಲ್ಲ ಕುರ್ನಾಡು ಗ್ರಾಮದ ಮನೆ ಮನೆಯ ನೆಂಟರಿಷ್ಟರಿಗೂ ಚಿರಪರಿಚಿತ ದೇವಪ್ಪಣ್ಣನ ಅಂಗಡಿ. ಮರದ ಗೂಡಂಗಡಿಯೊಳಗೆ ಗಾಜಿನ ಬಾಟಲಿಯೊಳಗೆ ಕುಳಿತ ಮಿಠಾಯಿಗಳು, ಪಾರ್ಲೆಜಿ, ಟೈಗರ್, ಕ್ರ್ಯಾಕ್‍ಜ್ಯಾಕ್ ಬಿಸ್ಕತ್ತಿನ ಐದು ರೂಪಾಯಿಯ ಪುಟ್ಟ ಪ್ಯಾಕೆಟ್‍ಗಳು ಸಾಲಾಗಿ ಹಿಂದೆ ಜೋಡಿಸಿಟ್ಟಿರುತ್ತಿದ್ದರು ದೇವಪ್ಪಣ್ಣ. ಮರದ ಬುಟ್ಟಿಯಲ್ಲಿ ತರಕಾರಿಗಳು.. ಬೀಡಿ, ಬೆಂಕಿಪೊಟ್ಟಣ್ಣ, ಇವಿಷ್ಟೇ ದೇವಪ್ಪಣ್ಣನ ಅಂಗಡಿಯ ಆಸ್ತಿಗಳು.
.
ಅಂಗಡಿಯ ಮುಂದೆ ಎರಡು ಮರದ ಕಂಬಗಳನ್ನು ಹಾಕಿ ತಗಡಿನ ಶೀಟು ಹಾಕಿ ನೆರಳಿರುವಂತೆ ನೋಡಿಕೊಂಡಿದ್ದರು. ಎರಡು ಮರದ ಬೆಂಚು, ಒಂದು ಬೆಂಚಿನ ಮುರಿದ ಕಾಲಿನ ಬದಲು ಎರಡು ಕಲ್ಲುಗಳನ್ನು ಇಟ್ಟಿದ್ದ ನೆನಪು.. 

ಅಂದ ಹಾಗೆ ದೇವಪ್ಪಣ್ಣ ಎರಡೆರಡು ವೃತ್ತಿಗಳನ್ನು ನಿಭಾಯಿಸಿ ಜೀವನ ಮುನ್ನಡೆಸುತ್ತಿರುವವರು. ಪೋಸ್ಟ್‍ಮ್ಯಾನ್ ಆಗಿ ರಾತ್ರಿ ಪಾಳಿಯಲ್ಲಿ ಕೆಲಸ ನಿರ್ವಹಿಸಿದರೆ, ಬೆಳಗ್ಗೆ ಮನೆಗೆ ಬಂದು ಮತ್ತೆ ತಮ್ಮ ಹಳೆಯ ಎಂ80ಯಲ್ಲಿ ಅಂಗಡಿಗೆ ತೆರಳಿದರೆ, ಪಕ್ಕಾ ವ್ಯಾಪಾರಸ್ಥರು.. ಊರಿನವರಿಗೆಲ್ಲಾ ತುಂಬಾ ಆತ್ಮೀಯರು ಮಾತ್ರವಲ್ಲದೇ, ಪರವೂರಿನವರಿಗೂ ಪರಿಚಿತರು ನಮ್ಮ ದೇವಪ್ಪಣ್ಣ.. ನಮ್ಮ ಏರಿಯಾದವರೇ ಆದುದರಿಂದ ನಾನಂತೂ ಅವರನ್ನು ದೇವಪ್ಪಮಾಮ ಅಂತ ಕರೆಯುತ್ತಿದ್ದೆ.. ಅವರ ಪುಟ್ಟ ಗೂಡಂಗಡಿಯ ಹಿಂದೆ ಎರಡು ಕಟ್ಟದ ಕೋಳಿಗಳನ್ನು ಕಟ್ಟುತ್ತಿದ್ದ ನೆನಪು..

ಈಗ 20 ವರ್ಷಗಳ ಹಿಂದಿಂದ್ದ ಊರಿನಂತಿಲ್ಲ ನಮ್ಮೂರು ಅಭಿವೃದ್ಧಿಯ ನೆಪದಲ್ಲಿ ಪ್ರಗತಿ ಕಾಣುತ್ತಿರುವ ಊರು, ಊರಿನ ಪಕ್ಕದಲ್ಲೇ ತಲೆ ಎತ್ತಿರುವ ಇನ್ಫೋಸಿಸ್ ಊರಿಗೊಂದು ಈಗೀಗ ಕಳೆಕೊಟ್ಟಿದೆ. ಅಂದ ಹಾಗೆ ದೇವಪ್ಪಣ್ಣನ ಅಂಗಡಿಯೂ ಈಗಿಲ್ಲ ರೋಡು ಅಗಲೀಕರಣದ ನೆಪದಲ್ಲಿ ಅಲ್ಲಿಂದ ಎತ್ತಂಗಡಿಯಾಗಿದೆ. ಯಾವುದೋ ಕಾಂಪ್ಲೆಕ್ಸಿನ ಮೂಲೆಯೊಂದರಲ್ಲಿ ತರಕಾರಿಯನ್ನಿಟ್ಟುಕೊಂಡು ವ್ಯಾಪಾರ ನಡೆಸುತ್ತಿದ್ದಾರೆ. ಈಗೀಗ ಬೇರೆ ಊರಿಂದ ಬಂದ ನೆಂಟರಿಗೆ ಬದಲಾದ ನಮ್ಮೂರು ಗುರುತು ಹಿಡಿಯಲು ಸ್ವಲ್ಪ ಸಮಯ ಬೇಕೆ ಬೇಕು, ಹಿಂದೆ ಆಗಿದ್ದರೆ ದೇವಪ್ಪಣ್ಣನ ಅಂಗಡಿ ಇತ್ತು.. ಬೇಗ ಗುರುತು ಸಿಕ್ತಾ ಇತ್ತು.. ಈಗ ತುಂಬಾ ಡೆವಲಪ್  ಆಗಿದೆ ಎನ್ನುವವರಿಗಂತೂ ಲೆಕ್ಕವಿಲ್ಲ. ಹಾಗೇನೆ ಮುಡಿಪಿನ ಕಟ್ಟೆ ವರ್ಷವೂ ಬಣ್ಣ ಹಚ್ಚಿಕೊಳ್ಳುವುದಂತೂ ಮರೆಯುವುದಿಲ್ಲ.  

ಕಾಲ ಬದಲಾಗಿದೆ, ನಮ್ಮೂರು ಬದಲಾಗಿದೆ.. ದೇವಪ್ಪಣ್ಣನ ಅಂಗಡಿ ಬದಲಾಗಿದೆ, ಆದರೆ ದೇವಪ್ಪಣ್ಣ ಮಾತ್ರ ಬದಲಾಗಿಲ್ಲ. 2ಜಿಯಿಂದ 5ಜಿಯತ್ತ ಕಾಲ ಬದಲಾದರೂ ದೇವಪ್ಪಣ್ಣ ಮಾತ್ರ ಮೊಬೈಲು ಇಟ್ಟುಕೊಂಡಿಲ್ಲ. ಮೆಸೇಜ್, ಈಮೇಲ್, ವಾಟ್ಸ್ಯಾಪ್, ಸ್ನ್ಯಾಪ್‍ಚಾಟ್ ಬಂದರೂ ದೇವಪ್ಪಣ್ಣ ಅಂಚೆ ಪ್ರೀತಿಗೆ ಅವೆಲ್ಲವೂ ಮಾರು ದೂರ ನಿಂತಿದೆ. ಮೊಬೈಲ್ ಇಲ್ಲದೇ ದಿನವೇ ನಡೆಯಲ್ಲ ಅನ್ನುವ ಮಂದಿಗೆ ಮಾದರಿಯಾಗಿ ದೇವಪ್ಪಣ್ಣ ಇಂದಿಗೂ ಮೊಬೈಲ್ ಇಲ್ಲದೆಯೇ ವ್ಯವಹಾರ ನಡೆಸುತ್ತಾರೆ. ಇಂದಿಗೂ ಬ್ರಹ್ಮಚಾರಿಯಾಗಿ ಬದುಕು ನಡೆಸುತ್ತಿರುವ ದೇವಪ್ಪಣ್ಣ ತಮ್ಮ ವೃತ್ತಿ ಪ್ರೀತಿ, ವೃತ್ತಿಯ ಮೇಲಿನ ಗೌರವವನ್ನು ಇನ್ನೂ ಉಳಿಸಿಕೊಂಡಿದ್ದಾರೆ ಎನ್ನುವುದಕ್ಕೆ ಮೊಬೈಲ್ ಇಲ್ಲದೇ ಸಂತೋಷವಾಗಿರುವ ದೇವಪ್ಪ ಮಾಮ ನಾ ಕಂಡ ವ್ಯಕ್ತಿಗಳ ಸಾಲಿನಲ್ಲಿ  ವಿಶೇಷ ಸ್ಥಾನ ಪಡೆದಿದ್ದಾರೆ. ಬಹುಶಃ ಇಂತಹ ಅಂಚೆ ವೃತ್ತಿ ಪ್ರಿಯರಿಂದಲೇ ಪೋಸ್ಟ್ ಆಫೀಸುಗಳು ಇನ್ನೂ ಉಳಿದುಕೊಂಡಿದೆ. 

ಒಳಮನಸಿನ ವಿಷಾದಗಳು..


ಪ್ರೀತಿಯ ಕೈಹಿಡಿದು ಒಳಗೆ ಕಾಲಿಟ್ಟ ಮನಸ್ಸಿನಲ್ಲಿದ್ದಿದ್ದು ನೂರೊಂದು ಕನಸುಗಳು.. ದಿನಗಳುರುಳಿದಂತೆ ಕಂಡಿದ್ದು ಕನ್ನಡಿಯೊಳಗಿನ ಕಾಣದ ಪ್ರತಿಬಿಂಬಗಳು.. ನನ್ನದಲ್ಲದ ಭಾಷೆಯ ಒತ್ತಡಗಳು.. ಪ್ರೀತಿಯೆಂಬ ಭಕ್ತಿ ಇದ್ದರೆ ಸಾಕು ಭಗವಂತನೊಲಿವ ಎನ್ನುವ ಮನಸಿಗೆ, ಮಂತ್ರಗಳು, ಪೂಜೆಗಳೆಂಬ ಭಯಸಹಿತ ಭಕ್ತಿ ಗಂಟಲಿನಲ್ಲಿ ಸಿಕ್ಕು ಚಡಪಡಿಸುತಿರಲು, ಮನದೊಳಗಿನ ದೇವನೂ ಕಂಗಾಲು.. 

ಕುತೂಹಲದಿ ಕ್ಲೈಮ್ಯಾಕ್ಸ್‍ಗೆ ಕಾಯುವಷ್ಟರಲ್ಲಿ, ಬದಲಾದ ಟಿವಿ ಪರದೆಗಳು.. ಬಹುಶಃ ಹೆಣ್ಣಿನ ದಿನಚರಿಯೇ ಕ್ಲೈಮ್ಯಾಕ್ಸ್ ಇರದ ಕಥೆಯಂತೆ.. ಬರೆಯುತ್ತಾ ಹೋದಂತೆ ಫುಲ್‍ಸ್ಟಾಪ್ ಇರದ ಲೇಖನದಂತೆ.. 
ಜಠರಾಗ್ನಿ ಕುದಿದಂತೆ, ಇನ್ನೂ ಕುದಿಸುವ ತುತ್ತುಗಳು.. ಪಂಚೇಂದ್ರಿಯಗಳಲ್ಲೂ ನೀರೋ ನೀರು.. ಎಡಗಣ್ಣಲ್ಲಿ ನೀರು ಸುರಿದರೆ ನೋವಂತೆ.. ಇದುವರೆಗೂ ಬಲಗಣ್ಣಲ್ಲಿ ನೀರು ಸುರಿದಿಲ್ಲ ಯಾಕೆ ಎಂದು ಮನಸ್ಸಿನ ಮೂಲೆಯಲ್ಲೊಂದು ಕೂಗು ಎದ್ದಿದೆ.. ಮತ್ತೆ ಎಡಗಣ್ಣು ತೇವವಾಗಿದೆ.. 
ಅಪಘಾತ ಆಘಾತವಾಗಿ ಬದುಕು ಬದಲಿಸಬಹುದು, ಕಣ್ತೆರೆಸಬಹುದು. ಕಣ್ತೆರೆದಿದೆ.. ಅತೃಪ್ತ ಬಯಕೆಗಳು ಹೊರಗೆ ಬಂದಿದೆ.. ಒಳ್ಳೆಯದಕ್ಕೆ ಕಾರಣ ನಾನಾದರೂ ಬೆನ್ನ ಹಿಂದೆ ಕಾಣದಾಗಬಹುದು, ಆದರೆ ಕೆಟ್ಟದಕ್ಕೆಲ್ಲವೂ ಕಾರಣ ನಾನಾಗಬಹುದು.. ಸತ್ಯ ಕಣ್ಣ ಮುಂದೆ ಕುಸಿದು ಕುಳಿತರೂ, ಸುಳ್ಳಿನ ಬೆನ್ನೇರಿ ಹೊರಟು ಬಿಡುವವರಿಗೆ ಸತ್ಯವೆನ್ನುವುದು ಕಾಣಿಸದು..
ನೀನಿನ್ನು ಸ್ವತಂತ್ರ ಎಂದು ರೆಕ್ಕೆ ಕತ್ತರಿಸಿ ಹಾರಿಸಿದರೆ, ಹಕ್ಕಿ ಹಾರುವುದೇ..? ಹೆತ್ತಾಕೆಗೆ ಮಗನೆಂಬ ವಾತ್ಸಲ್ಯ.. ನೀನೆ ನನ್ನ ಸರ್ವಸ್ವ ಎಂದು ಬಂದಾಕೆಗೆ ಪ್ರೀತಿಯೇ ಬಂಧನವಾದರೆ, ಬದುಕಿನ ಹಾಳೆಗಳಿಗೆ ಹೇಗೆ ಬಣ್ಣ ಹಚ್ಚುವುದೆಂದು?. ಕೊರಳಸೆರೆ ಹರಿದು ಬಂದರೂ ಧ್ವನಿ ಹೊರಡದಂತೆ ನಾಲ್ಕು ಗೋಡೆಗಳ ಮಧ್ಯೆ ಮೌನವಾಗಬೇಕು.. ಖಾಲಿ ಗೋಡೆಗಳನ್ನು ದಿಟ್ಟಿಸುತ್ತಾ ನಾಳೆಯ ಚಿತ್ರಗಳನ್ನು ಕಲ್ಪಿಸಿಕೊಳ್ಳಬೇಕು..
ಕಾಂಚಾಣದ ಮೇಲೆ ಜೀವನ ತೂಗುಯ್ಯಾಲೆಯಾಡುತಿದೆ. ಇಷ್ಟವಿಲ್ಲದ ಕೆಲಸ, ಕಷ್ಟಪಟ್ಟು ಮಾಡಹೊರಟರೆ, ಮೂಲೆಯಲ್ಲಿರುವ ಲೇಖನಿ ಅಳುತ್ತದೆ.. ನೋವೆಂದರೂ ಬಿಡದ ವರ್ಕೋಹಾಲಿಕ್ ಮನೋಸ್ಥಿತಿಗಳು.. ಮೆಟ್ರೋ ಸದ್ದೊಳಗೆ ನೋವು ಮೌನವಾಗಿ ಹುದುಗಿಹೋಗುತ್ತದೆ. ಮನಸೂ ಯಂತ್ರವಾಗಿದೆ.. ಬದುಕು ಯಾಂತ್ರಿಕವಾಗಿದೆ. ಅಡ್ಜಸ್ಟ್ ಎನ್ನುವ ಪದಗಳು ಲೈಫ್ ಡಿಕ್ಷನರಿಯ ಪುಟಗಳನ್ನು ಆವರಿಸಿದೆ. 
ಅಡ್ಜಸ್ಟ್ ಎನ್ನುವ ಪದಗಳು ಮನಸಿಂದ ಹೊರಬಂದ ಲಾವಾರಸವನ್ನೂ ತಣ್ಣಗಾಗಿಸಿದೆ. ಅಡ್ಜಸ್ಟ್ ಎನ್ನುವ ಪದ ಎಲ್ಲದಕೂ ಅಡ್ಡಗಾಲು ಹಾಕಿ, ಮನಸಿನ ಮಾತು ಆಚೆ ಬರದಂತೆ ಮಾಡಿದೆ. ನಿನ್ನಿಂದಲೇ ಎನ್ನುವ ಮಾತು ಈಗೀಗ ಹೊರಬರುತಿದೆ. ಬಿಕ್ಕಳಿಸಲೂ ಕೇಳಿ ಬಿಕ್ಕಳಿಸಬೇಕು, ಪ್ರೀತಿಯೆಂಬ ಸಂಕೋಲೆ ಎಲ್ಲವನ್ನೂ ಬಂಧಿಸಿದೆ.. ಮನಸಲ್ಲಿ ಮೂಡಿದ ಪದಗಳನ್ನು ಬರೆಯುವುದಕ್ಕೂ ಕೇಳಬೇಕಿದೆ. ಈಗೀಗ  ಪುಟ್ಟ ಹೆಜ್ಜೆ ಗುರುತೊಂದನು ಮನದಲಿ ಮೂಡಿಸುವಾಸೆ.. ಮತ್ತದೇ ಕೈಗಳು ಬಂಧಿಸಿದೆ.. ಹೊರಬರದಂತೆ..

ಪಾಸ್‌ವರ್ಡ್‌ ಮರೆತ್ಹೋಗೋ ಗೀಳು...? ಗೋಳೋ..? ಸಮಸ್ಯೆನಾ.. ಗೊತ್ತಿಲ್ಲ..!

    ಕೆ ಲವು ತಿಂಗಳ ಹಿಂದೆ ಫೋನ್‌ ಬಿದ್ದು ಡಿಸ್‌ಪ್ಲೇ ಹೋಗಿ, ಇರೋ ಬರೋ ನಂಬರುಗಳು ಕಳೆದುಕೊಂಡಿದ್ದಾಯ್ತು. ಅದರ ಜೊತೆಗೆ ನೋಟ್‌ನಲ್ಲಿ ಟೈಪಿಸಿಕೊಂಡಿದ್ದ ಇ-ಮೇಲ್, ಫೇಸ್‌ಬ...