Thursday, 20 September 2018

ಬೆಂಗಳೂರ ಟಾರು ರಸ್ತೆಯಲ್ಲಿ ಕೆ.ಎ.19..

ಹೇ..ಕೆ.ಎ.19.. ಹೌದು ಬೆಂಗಳೂರಿನ ಟಾರು ರಸ್ತೆಗಳಲ್ಲಿ ಕೆ.ಎ.19 ನಂಬರ್ ಪ್ಲೇಟ್ ಇರುವ ಯಾವುದೇ ವಾಹನಗಳು ಕಂಡರೆ ಸಾಕು, ನನ್ನಂತಿರುವ ಕರಾವಳಿಗರಿಗೆ ನಮ್ಮೂರ ಆತ್ಮೀಯರನ್ನೇ ನೋಡಿದಂತಾಗಿ ಹೃದಯ ಅರಳುತ್ತದೆ..

ಕೆಲಸವನ್ನರಸಿಕೊಂಡು ಕರಾವಳಿಯಿಂದ ಬೆಂಗಳೂರಿಗೆ ಬಂದ ತುಳುವರು ಬೆಂಗಳೂರಿನ ಅಲ್ಲಲ್ಲಿ ಚದುರಿಕೊಂಡು, ಬೆಂಗಳೂರ ಜನರ ಮಧ್ಯೆ ಬೆರೆತು ಹೋಗಿರುವಾಗ ಕರಾವಳಿಗರೆಂದು ಗುರುತು ಹಿಡಿಯಲು ಸಾಧ್ಯವಾಗುವುದು ಕೆ.ಎ.19 ಅಥವಾ ತಾಯಿ ಭಾಷೆ ತುಳುವಿನ ಮೂಲಕ..
ಆಫೀಸು, ಶಾಪಿಂಗ್ ಅಂತ ಪತಿಯೊಂದಿಗೆ ಗಾಡಿಯಲ್ಲಿ ಹೊರಟರೆ, ಕೆ.ಎ. 19 ಕಂಡ ತಕ್ಷಣ ಹೇ.. ಮಂಗಳೂರಿನವರು ಎಂದು ಕುಣಿದಾಡಿದಾಕ್ಷಣ ನನ್ನ ಪತಿವರ್ಯ ಹೋ ಹೌದಾ.. ಹಾಗಾದ್ರೆ ನಿಮ್ಮ ಸಂಬಂಧಿಕರೇ ಇರಬಹುದು.. ಹತ್ತಿರ ಹೋಗಿ ಗಾಡಿ ನಿಲ್ಲಿಸ್ತೀನಿ.. ಮಾತಾಡು ಅಂತ ಛೇಡಿಸುವುದುಂಟು..
ಶಾಪಿಂಗ್ ಸಂತೆಯಲ್ಲಿ ಅಲೆದಾಡುವಾಗಲೂ ಅಷ್ಟೇ ತುಳು ಭಾಷೆ ಕೇಳಿಸುತ್ತವೆಯೇನೋ ಎಂದು ಕಿವಿ ‘ಕೊಂಡೆ’ ಮಾಡಿಕೊಂಡು ಆಲಿಸಿದ್ದುಂಟು.. ತುಳು ಕಿವಿಗಪ್ಪಳಿದಾಕ್ಷಣ ಹೃದಯ ವೇಗವಾಗಿ ಬಡಿದುಕೊಳ್ಳುತ್ತದೆ. ಅದ್ಯಾಕೋ ಗೊತ್ತಿಲ್ಲ..
ಬೆಂಗಳೂರಲ್ಲಿದ್ದರೂ ತುಳು, ಕರಾವಳಿಯ ಕಡೆಗೆ ಮನಸ್ಸು ಹಾತೊರೆಯುತ್ತದೆ. ಎಷ್ಟೇ ಬಿಸಿಲಿದ್ದರೂ, ಬೆವರು ಧಾರೆಯಂತೆ ಹರಿದರೂ(ಬೆಂಗಳೂರಿಗರಾದ ನನ್ನವರು ಬೇಸಿಗೆಯಲ್ಲಂತೂ ಮಂಗಳೂರಿಗೆ ಬರುವುದಿಲ್ಲವೆಂದು ಶಪಥ ಮಾಡಿದ್ದಾರೆ) ಬಯಸುವುದು ಮಾತ್ರ ನಮ್ಮ ನೆಲ ಕರಾವಳಿಯನ್ನು..
ಮೊನ್ನೆಯಷ್ಟೇ ಫೇಸ್‍ಬುಕ್ಕಿನಲ್ಲಿ ಮಂಗಳೂರು ಮಲ್ಲಿಗೆಯ ಚಿತ್ರವನ್ನು ನೋಡಿದಾಕ್ಷಣ ಬೆಂಗಳೂರು ಬೀದಿಯಲ್ಲಿ ಮಾರುವ ಮಲ್ಲಿಗೆಯ ರಾಶಿಯಲ್ಲಿ ಮಂಗಳೂರು ಮಲ್ಲಿಗೆಯ ಘಮವನ್ನು ಹುಡುಕಿ ಸೋತುಹೋದೆ, ನಮ್ಮ ಮಂಗಳೂರು ಮಲ್ಲಿಗೆಯ ಘಮ ಯಾವ ಮಲ್ಲಿಗೆಗೂ ಇಲ್ಲವೆಂದು ಅಂದುಕೊಂಡೆ..
ಬೇಸರದ ಸಂಗತಿಯೆಂದರೆ ಎಷ್ಟೋ ಜನ ತುಳು ಭಾಷಿಗರು ಬೆಂಗಳೂರಿನಲ್ಲೇ ನೆಲೆಯೂರಿಕೊಂಡು ಮನೆಯಲ್ಲೇ ಮಕ್ಕಳೊಂದಿಗೆ ಕನ್ನಡ ಭಾಷೆ ಮಾತನಾಡುತ್ತಿದ್ದಾರೆ. ಅಂದರೆ ಬೆಂಗಳೂರಿನಲ್ಲೇ ಹುಟ್ಟಿ ಬೆಳೆದ ತಮ್ಮ ಮಕ್ಕಳಿಗೆ ತುಳು ಭಾಷಿಕರು ಕಲಿಸುವುದು ಕನ್ನಡವನ್ನು.. ಹಾಗಂತ ಕನ್ನಡ ಕಲಿಸಬಾರದೆಂದು ಹೇಳುವುದಿಲ್ಲ. ಕನ್ನಡದೊಂದಿಗೆ ತುಳು ಭಾಷೆಯನ್ನೂ ಕಲಿಸಿದರೆ, ಊರಲ್ಲಿರುವ ಅಜ್ಜ ಅಜ್ಜಿಯಂತೂ ಬೆಂಗಳೂರಲ್ಲಿದ್ರೂ ನನ್ನ ಪುಳ್ಳಿ ತುಳು ಮಾತನಾಡುವುದನ್ನು ಕಲಿತಿದ್ದಾಳೆ/ ಕಲಿತಿದ್ದಾನೆ ಎಂದು ಹೆಮ್ಮೆಯಿಂದ ಹೇಳಿಕೊಳ್ಳಬಹುದು..
ತೆಲುಗು ಭಾಷಿಕರಾದ ನನ್ನ ಪತಿರಾಯ ಎರಡೇ ಎರಡು ಪದ ತುಳು ಕಲಿತಿದ್ದಾರೆ. ಎಂಚ ಉಲ್ಲರ್?. ವನಸ್ ಆಂಡೆ?, ಇಷ್ಟೇ ನನ್ನ ಅಜ್ಜಿಯೊಂದಿಗೆ ಮಾತನಾಡಲು...!

No comments:

Post a Comment

ಪಾಸ್‌ವರ್ಡ್‌ ಮರೆತ್ಹೋಗೋ ಗೀಳು...? ಗೋಳೋ..? ಸಮಸ್ಯೆನಾ.. ಗೊತ್ತಿಲ್ಲ..!

    ಕೆ ಲವು ತಿಂಗಳ ಹಿಂದೆ ಫೋನ್‌ ಬಿದ್ದು ಡಿಸ್‌ಪ್ಲೇ ಹೋಗಿ, ಇರೋ ಬರೋ ನಂಬರುಗಳು ಕಳೆದುಕೊಂಡಿದ್ದಾಯ್ತು. ಅದರ ಜೊತೆಗೆ ನೋಟ್‌ನಲ್ಲಿ ಟೈಪಿಸಿಕೊಂಡಿದ್ದ ಇ-ಮೇಲ್, ಫೇಸ್‌ಬ...