Friday 5 October 2018

ಮಳೆಗಾಲದಲ್ಲಿ ನಮ್ಮೂರು...

ಇನ್ನೇನು ಆಫೀಸ್ ಪಂಚಿಂಗ್ ಮಿಷಿನ್‍ಗೆ ಹೆಬ್ಬೆರಳೊತ್ತಲು 1 ಗಂಟೆ ಬಾಕಿಯಿತ್ತು.. ಆಕಾಶದಲ್ಲಿ ಮೊಡ ಕಟ್ಟಿತ್ತು.. ಈ ಬೆಂಗಳೂರಿನ ಮಳೆಯೇ ಹೀಗಪ್ಪ.. ಆಫೀಸು ಬಿಡುವ ಹೊತ್ತಿಗೇ ಶುರುವಾಗಿ ಬಿಡುತ್ತೆ.. ಎಲ್ಲರೂ ಸಂಜೆ ಬರುವ ಮಳೆಗೆ ಶಾಪ ಹಾಕುತ್ತಿದ್ದರು.. ಬೆಂಗಳೂರಿನಲ್ಲಿ ಮಳೆ ಬಂದರೆ ಸಾಕು ಜೀವನದಲ್ಲಿ ಜಿಗುಪ್ಸೆ ಆವರಿಸಿ ಬಿಡುತ್ತದೆ.. ಅಲ್ಲಲ್ಲಿ ಅಪ್ಪದ ಕಾವಲಿಯಂತಾಗಿರುವ ರಸ್ತೆಗಳು.. ಎಲ್ಲಿ ನೀರು ನಿಂತಿರುತ್ತೋ ಗೊತ್ತಿಲ್ಲ.. ರೋಡ್‍ನ ಮಧ್ಯೆ ಇರುವ ಡ್ರೈನೇಜ್ ಕವಚಗಳು ಬುಸ್ ಬುಸ್ ಎನ್ನುತ್ತಿರುತ್ತವೆ, ಯಾವಾಗ ಮೇಲೆ ಚಿಮ್ಮುವುದೋ ಗೊತ್ತಿಲ್ಲ..! ರೋಡ್ ತುಂಬಾ ಕರಿ ನೀರು.. ಕೊಚ್ಚೆಯ ನೀರು ಮಳೆಯ ನೀರು ಒಂದಾಗಿ ರೋಡ್ ಮೇಲೆ ಹರಿಯುತ್ತಿರುತ್ತದೆ.

 ದ್ವಿಚಕ್ರ ಸವಾರರಿಗೊಂದು ಬೆಂಗಳೂರಿನ ಮಳೆಯೆಂದರೆ ಸವಾಲು.. ಮುಂದೆಯಿಂದ ಹೋಗುವ ವಾಹನದ ಟೈರ್‍ನಿಂದ ಮುಖಕ್ಕೆ ಕಾರಂಜಿಯಂತೆ ಮರಳು ಮಿಶ್ರಿತ ನೀರು ಅಭಿಷೇಕ ಮಾಡುತ್ತಿರುತ್ತದೆ.. ಪಕ್ಕದಲ್ಲಿ ಕಾರಿನವನು ಗುಂಡಿಯಲ್ಲಿ ಟೈರ್ ಇಳಿಸಿದರೆ ಸಾಕು.. ಪಕ್ಕದಲ್ಲಿರುವ ದ್ವಿಚಕ್ರವಾಹನ ಸವಾರ ಅರ್ಧ ಕೆಸರೇಶ್ವರ.. ಅಯ್ಯೋ.. ಮಧ್ಯೆ ಈ ಟ್ರಾಫಿಕ್ ಜಾಮ್ ವರುಣನಿಗೇ ಪ್ರೀತಿ..
ಬೆಂಗಳೂರ ಮಳೆಯ ಬಗ್ಗೆ ಹೇಳುತ್ತಿದ್ದಂತೆ.. ನಮ್ಮೂರ ಮಳೆಯ ಬಗ್ಗೆ ಹೇಳಬೇಕೆಂದೆನಿಸುತ್ತದೆ.. ನಮ್ಮೂರ ಮಳೆಯೇ ಇಷ್ಟ ನನಗೆ.. ಮಳೆ ಬರುವ ಸೂಚನೆಗೆ ಮೋಡ ಕಟ್ಟಿ ದಟ್ಟವಾಗಿ ಆವರಿಸುತ್ತಾ ಹೋಗುತ್ತಿದ್ದಂತೆ.. ಒಣಗಲು ಹಾಕಿದ್ದ ಬಟ್ಟೆಗಳೆಲ್ಲಾ ನಗು ನಗುತ್ತಾ ಮನೆಯೊಳಗೆ ಬೆಚ್ಚಗೆ ಹೋಗುತ್ತವೆ.. ದೂರದಿಂದಲೇ ಮಳೆ ಆರ್ಭಟಿಸುತ್ತಾ ಬರುವಾಗ ಜೊತೆಗೆ ತಂಪಾದ ಗಾಳಿಯನ್ನೂ ಹೊತ್ತು ತರುತ್ತದೆ. ಭೋರೆಂದು ಸುರಿವ ಮಳೆ ಏಕತಾನತೆಯಲ್ಲಿ ಸುರಿಯುತ್ತಲೇ ಇರುತ್ತದೆ.. ಜೊತೆಗೆ ಗುಡುಗು ಮಿಂಚುಗಳ ಅಬ್ಬರಕ್ಕೆ ಮನೆಯೊಳಗಿನ ಕಬ್ಬಿಣದ ಕತ್ತಿ ಅಂಗಳದಲ್ಲಿ ಅಂಗಾತವಾಗಿ ಮಲಗಿರುತ್ತದೆ.. ಮಳೆಯ ರಭಸಕ್ಕೆ ಮಾಡಿನಿಂದ ನೀರು ಹರಿದು ಹೋಗಲು ಜಾಗವಿಲ್ಲದೆ.. ಮನೆಯೊಳಗೆ ಇಣುಕುತ್ತವೆ. ಅಡುಗೆ ಮನೆಯೊಳಗಿನ ಪಾತ್ರೆಯೆಲ್ಲ ಮನೆಯೊಳಗೆ ಬೀಳುವ ನೀರಿನ ಕೆಳಗಿಟ್ಟರೆ ಠಣ್ ಠಣ್ ಸದ್ದು, ಹೊರಗಿನ ಮಳೆಯ ಸದ್ದನ್ನು ಮರೆಯಾಗಿಸುತ್ತದೆ..
ಕಿಟಕಿಯ ಪರದೆ ಸರಿಸಿ ನೋಡಿದರೆ, ಮಳೆಯ ರಾಗಕ್ಕೆ ತಲೆದೂಗಿ ಬಾಗುವ ಕಂಗು, ಮಳೆಯ ಹನಿಯನ್ನು ನೇವರಿಸಿಕೊಂಡು ಓಲಾಡುವ ತೆಂಗಿನ ಗರಿಗಳು.. ಬಾಳೆಯ ಗೊನೆ ನೆಲವನ್ನು ಅಪ್ಪಿಕೊಳ್ಳಲೋ ಬೇಡವೋ ಎಂಬಂತೆ ಬಾಗಿಕೊಂಡು ಬಿಟ್ಟಿರುತ್ತದೆ.  ಮನೆಯ ಮಾಡಿನಿಂದ ಮುತ್ತಿನಂತೆ ಅಂಗಳವನ್ನಪ್ಪುವ ಮಳೆಹನಿಯು ಎಲ್ಲರಲ್ಲೊಂದಾಗಿ ದಾರಿ ಮಾಡಿಕೊಂಡು, ಪುಟ್ಟ ಹಳ್ಳವ ಸೇರಿಕೊಂಡು ನದಿಯ ಸೇರುವ ರಭಸದಲ್ಲಿ ಓಡುತ್ತಿರುತ್ತದೆ. ಮಳೆ ನೀರ ಮೇಲೆ ಗುಳ್ಳೆ ಬಿದ್ದರೆ ಓಹೋ.. ಮಳೆ ಇನ್ನೂ ಬರುವುದಿದೆ ಎಂದು ಮನೆಯಲ್ಲೇ ಹವಾಮಾನದ ವರದಿ ಒಪ್ಪಿಸುವ ಅಮ್ಮ, ಬೆಚ್ಚಗೆ ಸಾಂತಣಿಯನ್ನೋ, ಹಲಸಿನ ಹಪ್ಪಳ, ಉಂಡ್ಲೂಕವನ್ನೋ ಮೆಲ್ಲುತ್ತಾ ಮಳೆಯನ್ನು ಆಸ್ವಾದಿಸುವ ಆನಂದವೇ ಚಂದ..
ಮಳೆ ಬರುವ ಮುನ್ನ ಒಂದು ಕಥೆಯಾದರೆ, ಮಳೆ ನಿಂತು ಹೋದ ಮೇಲೆ ಇನ್ನೊಂದು ಮಹತ್ಕಾರ್ಯವಿದೆ.. ನಮ್ಮಮ್ಮ ಒಂದು ಕೈಯಲ್ಲಿ ಮುರಿದ ಕೊಡೆ, ಒಂದು ಕೈಯಲ್ಲಿ ಹಾರೆ ಹಿಡಿದುಕೊಂಡು ಅಲ್ಲಲ್ಲಿ ನಿಂತ ನೀರಿಗೆ ಮುಂದೆ ಹೋಗಲು ದಾರಿ ಮಾಡಿಕೊಡುತ್ತಾಳೆ..  ಅಂಗಳದಲ್ಲಿ ಬಿಟ್ಟಿದ್ದ ಹವಾಯಿ ಚಪ್ಪಲಿಯ ಒಂದು ಜತೆ ನೀರಲ್ಲಿ ತೇಲಿಕೊಂಡು ಹೋಗಿ ಬೇಲಿಯ ಬದಿಯಲ್ಲಿ ಸಿಕ್ಕಿಹಾಕಿಕೊಂಡಿರುತ್ತದೆ.. ಪಾದಗುಂಟ ಕಾಣುವ ಅಂಗಳದಲ್ಲಿನ ನೀರು ಹೆಜ್ಜೆ ಇಡುವಂತೆ ಆಹ್ವಾನ ನೀಡುತ್ತದೆ. ಸ್ಲಿಪ್ಪರ್ ಮೆಟ್ಟಿಕೊಂಡು ಚರ್‍ಪರ್ ಸದ್ದು ಮಾಡುತ್ತಾ ಮಳೆ ನೀರಿನಲ್ಲಿ ಆಡುವಾಗ ಅಮ್ಮ ಅಲ್ಲಿಂದಲೇ ಎಚ್ಚರಿಕೆಯ ಕೂಗು ಹಾಕುತ್ತಾಳೆ.. ಬಟ್ಟೆ ಆರಲು ಹಾಕುವ ತಂತಿಯಲ್ಲಿ ಮಳೆಯ ನೀರು ಮುತ್ತಿನಂತೆ ಸಾಲಾಗಿ ನಿಂತಿರುತ್ತದೆ. ಕೈಬೆರಳು ಮೆಲ್ಲನೆ ತಂತಿಯನ್ನು ಮೀಟಿದಾಗ ಮುತ್ತಿನಂತಹ ನೀರು ಅಂಗೈ ಸೇರಿ ಮುಂಗೈಯಿಂದ ಜಾರಿ ಕೆಳಗೆ ಬೀಳುತ್ತದೆ. ಮಳೆ ಬಂದ ಖುಷಿಗೆ ಕಪ್ಪೆಗಳು ಅಲ್ಲಲ್ಲಿ ಜಿಗಿಯುತ್ತಿರುತ್ತದೆ. ಟೊರ್ ಟೊರ್ ಎನ್ನುತ್ತಾ ಇನ್ನೂ ಮಳೆಯಾಗುವ ಸೂಚನೆ ನೀಡುತ್ತದೆ. ಆಗಷ್ಟೇ ಮೌನವಾಗಿ ಅಡಗಿಕೊಂಡಿದ್ದ ವರುಣ ಮತ್ತೆ ತುಂಟನಾಗಿ ಮಳೆ ಹನಿಯ ಚೆಲ್ಲುತ್ತಾನೆ.. ಅಮ್ಮ ಮಳೆಗೆ ಬೈಯುತ್ತಾ ಮತ್ತೆ ಒಳಗೆ ಬರುತ್ತಾಳೆ.. ಮಳೆಗೆ ಬೆಚ್ಚಗೆ ಮಲಗಿಕೊಂಡು ಮಳೆನಿಂತ ಕೂಡಲೇ ಕೈಕಾಲು ಆಡಿಸಲು ಹೊರಗೆ ಹೋಗಿದ್ದ ಬೆಕ್ಕು ಮತ್ತೆ ಕಿಟಕಿಯಿಂದ ಮನೆಯೊಳಗೆ ಜಿಗಿಯುತ್ತದೆ.. ಇನ್ನೊಂದು ಕೆಂಪು ಮಣ್ಣಿನ ಅಚ್ಚೊತ್ತು ಬೆಕ್ಕಿನ ನಾಲ್ಕು ಬೆರಳಿನ ಮುದ್ದಾದ ಪಾದದ ಗುರುತಿನಿಂದ ಕಿಟಕಿಯ ಗೋಡೆಯ ಮೇಲೆ ಬೀಳುತ್ತದೆ..
ಸಂಜೆಯಾದರೆ ಸಾಕು ಎಲ್ಲರ ಮನೆಯ ಬಚ್ಚಲಲ್ಲಿ ಹೊಗೆಯೇಳುತ್ತದೆ.. ಮಳೆಗೆ ಒದ್ದೆಯಾದ ಕಟ್ಟಿಗೆ, ತೆಂಗಿನ ಕಾಯಿ ಚಿಪ್ಪು ಬೆಂಕಿಯೇಳದೆ ಬರೀ ಹೊಗೆಯುಗುಳುತ್ತದೆ. ಸೋಂಟೆಯಿಂದ ಬಚ್ಚಲಿನ ಒಲೆಗೆ ಊದಿ ಊದಿ ಗಂಟಲಿನ ಪಸೆ ಆರಿ, ಕಣ್ಣೆಲ್ಲಾ ಕೆಂಬೂತದ ಕಣ್ಣಿನಂತಾಗುತ್ತದೆ. ಮಳೆಗಾಲದಲ್ಲಿ ಬೇಗ ಸ್ನಾನ ಮಾಡಿದವರಿಗೆ ಬಿಸಿಬಿಸಿ ನೀರು ಸಿಕ್ಕರೆ ಕೊನೆಗೆ ಸ್ನಾನ ಮಾಡುವವರು ಮಾತ್ರ ಒಂದು ಚೆಂಬು ಮಾತ್ರ ನೀರು ಸುರಿದುಕೊಂಡು ಬರಬೇಕಾಗಿರುತ್ತದೆ. ಒಂದೋ ನೀರು ಖಾಲಿಯಾಗಿರುತ್ತದೆ. ಇಲ್ಲವೇ ನೀರು ತಣ್ಣಗಾಗಿಬಿಡುತ್ತದೆ.. ಹೀಗಾಗಿ ಮಳೆಗಾಲದಲ್ಲಿ ಅವಿಭಕ್ತ ಕುಟುಂಬದ ಮಕ್ಕಳಲ್ಲಿ ಸ್ನಾನಕ್ಕೆ ಜಗಳವಾಗುವುದಂತೂ ಸತ್ಯ.

ರಾತ್ರಿಯಾದರೆ ನೀರವವಾಗಿ ಸುರಿವ ಮಳೆ, ಹೊರಗೆ ಜೀರುಂಡೆಗಳ ಝೇಂಕಾರರೊಂದಿಗೆ, ಕಪ್ಪೆಗಳ ವಟರ್ ವಟರ್ ಸದ್ದು ಮಳೆಗಾಲದ ರಾತ್ರಿಯ ಸಂಗೀತ ಸಾಮಾನ್ಯ.. ಕಗ್ಗತ್ತಲಲ್ಲಿ ತೋಟದ ಬದಿಯ ಹಳ್ಳದಲ್ಲಿ ಬೆಳಕೊಂದು ಕಾಣುತ್ತದೆ.. ಅದು ಮಳೆಗೆ ಏಡಿ ಹಿಡಿಯಲು, ಗಾಳ ಹಾಕಲು ಹೋದವರ ಟಾರ್ಚ್ ಬೆಳಕು..
ಆಗಾಗ ಹೋಗುವ ಕರೆಂಟು.. ಮಳೆಗಾಲದಲ್ಲಿ ಕರೆಂಟು ಅಪರೂಪದ ಅತಿಥಿಯಾದರೆ, ಸೊಳ್ಳೆಯಂತೂ ಪ್ರತಿದಿನದ ಅತಿಥಿ.. ಒಮ್ಮೆಗೆ ಕಿವಿಯ ಬಳಿ ಗುಯ್ಯೆಂದು ಗುರುಟು ಹಾಕುವುದನ್ನು ಕೇಳಿಸಿಕೊಂಡರೆ ಅಸಹನೀಯ ಸಿಟ್ಟೊಂದು ಬಂದು ಕಂಬಳಿಯನ್ನು ಕಾಲಿನಿಂದ ತಲೆಯವರೆಗೂ ಎಳೆದುಕೊಂಡು, ಮುಸುಕು ಹಾಕಿ ಮಲಗಿದರೆ, ಏಳುವುದು ಬೆಳಗ್ಗೆಯೇ..ಹೀಗೆ ಬೆಂಗಳೂರಿನ ಮಳೆಯನ್ನು ನೋಡಿದರೆ, ನಮ್ಮೂರ ಮಳೆ, ಬಚ್ಚಲಿನಂತಾಗುವ ನಮ್ಮೂರು ನೆನಪಾಗುತ್ತದೆ..

4 comments:

  1. ಮಂಗಳೂರಿನ ಮುಡಿಪು ಪರಿಸರದ ವರ್ಣನೆ ಮನಸ್ಸಿಗೆ ಹತ್ತಿರವೆನಿಸುತ್ತೆ. ಮಳೆಗಾಲ ಎಂದರೆ ನಮ್ಮ‌ ಬಾಲ್ಯ ಮಳೆಗಾಲದೊಂದಿಗಿನ ನಮ್ಮ ಸ್ನೇಹ ಮರೆಯಲಾಗದು ಬರವಣಿಗೆಯ ಶೈಲಿ ಚೆನ್ನಾಗಿದೆ ಬರೆಯುತ್ತಾ ಇರ.

    ReplyDelete
  2. ಅದ್ಭುತವಾದ ಚಿತ್ರಣ...ಮತ್ತೆ ಮತ್ತೆ ಮಳೆಯಾಗುತ್ತಿರಲಿ...ಮೈ ಮನ ನೆನೆಯುತ್ತಿರಲಿ...ಎಂದೆನಿಸುವಂತಹ ಭಾವ ಮೂಡಿತು...ಹೀಗೆ ಮುಂದುವರೆಯಲಿ ಬರವಣಿಗೆ...

    ReplyDelete

ಪಾಸ್‌ವರ್ಡ್‌ ಮರೆತ್ಹೋಗೋ ಗೀಳು...? ಗೋಳೋ..? ಸಮಸ್ಯೆನಾ.. ಗೊತ್ತಿಲ್ಲ..!

    ಕೆ ಲವು ತಿಂಗಳ ಹಿಂದೆ ಫೋನ್‌ ಬಿದ್ದು ಡಿಸ್‌ಪ್ಲೇ ಹೋಗಿ, ಇರೋ ಬರೋ ನಂಬರುಗಳು ಕಳೆದುಕೊಂಡಿದ್ದಾಯ್ತು. ಅದರ ಜೊತೆಗೆ ನೋಟ್‌ನಲ್ಲಿ ಟೈಪಿಸಿಕೊಂಡಿದ್ದ ಇ-ಮೇಲ್, ಫೇಸ್‌ಬ...